ಬಿಜೆಪಿ ರಾಜ್ಯ ಘಟಕದಲ್ಲಿ ಈಗ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ. ಅವರ ನೇತೃತ್ವದಲ್ಲೇ ನಾವು ಲೋಕಸಭಾ ಚುನಾವಣೆ ಎದುರಿಸಿದ್ದೇವೆ. ಯಾರು ಅಧ್ಯಕ್ಷರಿರುತ್ತಾರೋ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಯಾವಾಗ ಅಂತಿಮವಾಗಿ ಒಬ್ಬ ಅಧ್ಯಕ್ಷರನ್ನು ಪ್ರಕಟಿಸಲಾಗುವುದೋ ಆಗ ಹಳೆಯ ತಂಡದ ಬದಲಾಗಿ ಸಹಜವಾಗಿ ಹೊಸ ತಂಡ ರಚಿಸಲಾಗುತ್ತದೆ. ಆಗ ಇಡೀ ರಾಜ್ಯದ ಬಿಜೆಪಿ ಗೆಲ್ಲಿಸಿ ಹಳಬರನ್ನು ಕೈ ಬಿಟ್ಟು ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪರೋಕ್ಷವಾಗಿ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು ಮುಂದುವರಿಯುತ್ತಾರೋ, ಇಲ್ಲವೋ ಎಂಬುದು ಇಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನವಾಗುವುದಿಲ್ಲ. ಇಲ್ಲಿನ ಸಭೆಯಲ್ಲಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಭ್ರಮೆಯಲ್ಲಿ ಯಾರಾದರೂ ಇದ್ದರೆ ಸರಿಯಲ್ಲ. ಅಧ್ಯಕ್ಷರನ್ನು ಮತ್ತೊಂದು ಅವಧಿಗೆ ಬೇಕಾದರೂ ಮುಂದುವರಿಸಬಹುದು ಎಂದು ವಿಜಯೇಂದ್ರ ವಿರೋಧಿಗಳ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಅಲ್ಲದೆ “ನಾನು ಯಾವುದೇ ವೈಯಕ್ತಿಕ ನಾಯಕನ ಕಾರ್ಯಕರ್ತನಲ್ಲ, ಬದಲಿಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಪಕ್ಷದ ವಿದ್ಯಮಾನಗಳ ಬಗ್ಗೆ ನಾನೇ ಎಲ್ಲವನ್ನೂ ನೇರವಾಗಿ ಹೇಳಬಲ್ಲೆ” ಎಂದಿದ್ದಾರೆ. ಹೊಸದಾಗಿ ಒಬ್ಬರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಹಳೆಯ ತಂಡದ ಜಾಗಕ್ಕೆ ಹೊಸ ಪದಾಧಿಕಾರಿಗಳ ತಂಡ ಬರುವುದು ಸಹಜ ಪ್ರಕ್ರಿಯೆ. ಆದರೆ ಹೊಸ ಅಧ್ಯಕ್ಷರು ಬಂದ ತಕ್ಷಣ ಕೋರ್ ಕಮಿಟಿ ಬದಲಾಗುವುದಿಲ್ಲ, ಅದನ್ನು ರಾಷ್ಟ್ರೀಯ ಘಟಕವೇ ತೀರ್ಮಾನಿಸುತ್ತದೆ ಎಂದು ವಿಜಯೇಂದ್ರ ಅವರ ನಾಯಕತ್ವದ ಬದಲಾವಣೆ ಅಥವಾ ಮೌಲ್ಯಮಾಪನ ನಡೆಯುತ್ತಿದೆ ಎನ್ನುವುದೆಲ್ಲಾ ಕೇವಲ ಭ್ರಮೆ ಎಂದು ಹೇಳುವ ಮೂಲಕ ಅವರು ಪಕ್ಷದೊಳಗಿನ ಭಿನ್ನಮತೀಯ ಗುಂಪಿಗೆ ಖಡಕ್ ಟಾಂಗ್ ನೀಡಿದ್ದಾರೆ.
