ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಯಾಗಿ, 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.


54 ವರ್ಷದ ಪೇರರಿವಾಲನ್, ಸ್ಫೋಟಕ ಸಾಧನ ಪೂರೈಸಿದ ಆರೋಪದ ಮೇಲೆ 1991ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಬಂಧನಕ್ಕೊಳಗಾಗಿದ್ದರು. 2022ರಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಬಿಡುಗಡೆಯಾದ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. 2025ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ವಕೀಲರಾಗಿದ್ದಾರೆ. ತಮಿಳುನಾಡು ಮತ್ತು ಪುದುಚೇರಿ ವಕೀಲ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಅವರು, ಕೈದಿಗಳಿಗೆ ಕಾನೂನು ನೆರವು ನೀಡುವ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ.
ಸೋಮವಾರ ನಡೆದ ಸಮಾರಂಭದಲ್ಲಿ ಅವರನ್ನು ಅಧಿಕೃತವಾಗಿ ವಕೀಲರ ಪರಿಷತ್ತಿಗೆ ಸೇರಿಸಿಕೊಳ್ಳಲಾಯಿತು. ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ
31 ವರ್ಷಗಳ ಸುದೀರ್ಘ ಹೋರಾಟ:
1991ರಲ್ಲಿ ಎಲ್ಟಿಟಿಇ ಉಗ್ರ ಸಂಘಟನೆ ನಡೆಸಿದ ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಲನ್ ಬಂಧನಕ್ಕೊಳಗಾದಾಗ ಅವರಿಗೆ ಕೇವಲ 19 ವರ್ಷ. ವಿಚಾರಣೆಗೆಂದು ಕರೆದೊಯ್ದ ಪೊಲೀಸರು ಮರುದಿನವೇ ಕಳುಹಿಸುವುದಾಗಿ ಪೋಷಕರಿಗೆ ಹೇಳಿದ್ದರು. ಅದನ್ನು ನಂಬಿದ ಪೋಷಕರು ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಿಡುಗಡೆ ಮಾಡಲಿಲ್ಲ. ಸಿಬಿಐ ವಶದಲ್ಲಿದ್ದ ಪೆರಾರಿವಾಲನ್ ಅವರನ್ನು ಭೇಟಿ ಮಾಡಲು ಅವರ ತಾಯಿಗೂ ಅವಕಾಶ ನೀಡಲಿಲ್ಲ. ಸುಮಾರು 59 ದಿನಗಳ ಕಾಲ ಅವರು ಎಲ್ಲಿದ್ದಾರೆ ಎಂಬ ಸುಳಿವೇ ಇರಲಿಲ್ಲ. ನ್ಯಾಯಾಲಯದ ಮೊರೆ ಹೋದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹೆದರಿದ ಕುಟುಂಬ, ಹೇಬಿಯಸ್ ಕಾರ್ಪಸ್ ಅರ್ಜಿಯನ್ನೂ ಹಾಕಿರಲಿಲ್ಲ. ತಮ್ಮ ಮಗ ನಿರಪರಾಧಿಯಾಗಿದ್ದು, ನ್ಯಾಯ ವ್ಯವಸ್ಥೆ ಆತನನ್ನು ಶಿಕ್ಷಿಸುವುದಿಲ್ಲ ಎಂನ ನಂಬಿಕೆ ಅವರದಾಗಿತ್ತು.
ರಾಜೀವ ಗಾಂಧಿ ಅವರನ್ನು ಹತ್ಯೆ ಮಾಡಲು ಬಳಸಿದ ಬಾಂಬ್ಗೆ 9 ವೋಲ್ಟ್ ಬ್ಯಾಟರಿಗಳನ್ನು ಪೆರಾರಿವಾಲನ್ ಖರೀದಿಸಿಕೊಟ್ಟಿದ್ದರು ಎಂಬುದು ಅವರ ಮೇಲಿದ್ದ ಮುಖ್ಯ ಆರೋಪ. ಅಂಗಡಿಯ ಮಾಲೀಕನ ಸಾಕ್ಷ್ಯವನ್ನೇ ಇದಕ್ಕೆ ಆಧಾರವಾಗಿ ಬಳಸಲಾಗಿತ್ತು. ‘ಟಾಡಾ’ (TADA) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 1998ರಲ್ಲಿ ಟಾಡಾ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತು. ಇದನ್ನು 1999ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಆದರೆ, ಕ್ಷಮಾದಾನ ಅರ್ಜಿಯ ವಿಲೇವಾರಿಯಲ್ಲಿ ಕೇಂದ್ರ ಸರ್ಕಾರ 11 ವರ್ಷ ವಿಳಂಬ ಮಾಡಿದ ಕಾರಣ, 2014ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತು. ಅಂತಿಮವಾಗಿ 2022ರ ಮೇ 18ರಂದು ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಿತು.

