ಮಂಗಳೂರು: ಹುಟ್ಟುಹಬ್ಬ ಆಚರಿಸಲು ಕೊಡಗಿನಿಂದ ಮಂಗಳೂರಿಗೆ ಬಂದಿದ್ದ ಯುವಕರನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.


ಕೊಡಗು ಜಿಲ್ಲೆಯ ಸೋಮವಾರಪೇಟೆಯ ಅಜಯ್ ಕೆ. (29) ಎಂಬವರು ಏಪ್ರಿಲ್ 13ರಂದು ತಮ್ಮ ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಅವರೊಂದಿಗೆ ಜನ್ಮದಿನ ಆಚರಿಸಲು ತಣ್ಣೀರುಬಾವಿ ಬೀಚ್ಗೆ ಬಂದಿದ್ದರು. ಬೆಳಗಿನ ಜಾವ 2:30ರ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ಹೋಗಿದ್ದು, ಆ ಸಂದರ್ಭದಲ್ಲಿ, ವಿಳಾಸ ಕೇಳಲೆಂದು ರಸ್ತೆಯಲ್ಲಿದ್ದ ಇಬ್ಬರು ಯುವಕರನ್ನು ಮಾತನಾಡಿಸಿದ್ದಾರೆ.
ವಿಳಾಸ ತೋರಿಸುವ ನೆಪದಲ್ಲಿ ಕಾರು ಹತ್ತಿದ ಯುವಕರು, ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಸ್ಕ್ರೂ ಡ್ರೈವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ. ಕಾರಿನ ಗ್ಲಾಸನ್ನು ಪುಡಿ ಮಾಡಿದ್ದಾರೆ. ಅಜಯ್ ಮತ್ತು ಸ್ನೇಹಿತರ ಬಳಿಯಿದ್ದ ಟೈಟಾನ್ ಮತ್ತು ಫಾಸ್ಟ್ ಟ್ರ್ಯಾಕ್ ವಾಚ್ಗಳು, ಗಿಂಬಲ್, ಪವರ್ ಬ್ಯಾಂಕ್ ಹಾಗೂ ನಗದು ಸೇರಿದಂತೆ ಒಟ್ಟು 32.500 ರೂ. ಮೌಲ್ಯದ ಸೊತ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡ ತನಿಖೆ ನಡೆಸಿ, ಘಟನೆ ನಡೆದ ದಿನವೇ (ಏಪ್ರಿಲ್ 13) ಕಸಬಾ ಬೆಂಗ್ರೆಯ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22) ಎಂಬುವವರನ್ನು ಬಂಧಿಸಿತ್ತು. ಆದರೆ, ಪ್ರಮುಖ ಆರೋಪಿ ಚಂದು ಹಾರೀಸ್ ಪರಾರಿಯಾಗಿದ್ದನು.
ತಲೆಮರೆಸಿಕೊಂಡಿದ್ದ ಚಂದು ಹಾರೀಸ್ (33) ಎಂಬಾತನನ್ನು ಬುಧವಾರ (ಏಪ್ರಿಲ್ 22) ಪೊಲೀಸರು ಬಂಧಿಸಲಾಗಿದೆ. ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಣಂಬೂರು ಠಾಣೆಯ ರೌಡಿ ಶೀಟರ್ ಆಗಿರುವ ಈತನ ವಿರುದ್ಧ ಈಗಾಗಲೇ ಮೂರು ನ್ಯಾಯಾಂಗ ವಾರೆಂಟ್ಗಳಿದ್ದವು. ಸದ್ಯ ಪೊಲೀಸರು ಸುಲಿಗೆಯಾದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

