Bengaluru :ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಯಾವುದೇ ರೀತಿಯ ಟ್ಯಾಕ್ಸ್ ಅನ್ನು ವಿಧಿಸುವುದಿಲ್ಲ. ಅಂದರೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶವಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಬೆಂಗಳೂರಿನ ಕಾರಿಡಾರ್ನಲ್ಲಿ ಸೈಕಲ್ ಸವಾರನೊಬ್ಬನಿಂದ 25 ರೂ. ಟೋಲ್ ವಸೂಲಿ ಮಾಡಿರುವ ವಿಡಿಯೋ ಈಗ “ತೆರಿಗೆ ಅಥವಾ ಸುಲಿಗೆ?” ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.


ಹೌದು, ಭಾರತದ ಧ್ವಜವನ್ನು ಹಿಡಿದು ಸೈಕಲ್ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ಸವಾರನೊಬ್ಬ ಬೆಂಗಳೂರಿನ ನೈಸ್ ರಸ್ತೆಯ ಟೋಲ್ ಪ್ಲಾಜಾಕ್ಕೆ ಬಂದಾಗ ಈ ಘಟನೆ ನಡೆದಿದೆ. ಸೈಕಲ್ ಸವಾರನನ್ನು ತಡೆದ ಟೋಲ್ ಸಿಬ್ಬಂದಿ, ಒಂದು ಕಡೆಯ ಪ್ರಯಾಣಕ್ಕೆ 25 ರೂಪಾಯಿ ಹಣ ಕಟ್ಟು ಎಂದು ಒತ್ತಾಯಿಸಿದ್ದಾರೆ. ಸೈಕಲ್ ಸವಾರ ಆಶ್ಚರ್ಯಚಕಿತನಾಗಿ ಪ್ರಶ್ನಿಸಿದರೂ, ಸಿಬ್ಬಂದಿ ಮಾತ್ರ ರೇಗಾಡುತ್ತಾ ಅವಾಜ್ ಹಾಕಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸೈಕಲ್ ಸವಾರ ಟೋಲ್ ಬೂತ್ನಲ್ಲಿ ನಿಂತು ನಗದು ಹಣ ನೀಡುತ್ತಿರುವುದು ಮತ್ತು ಸಿಬ್ಬಂದಿ ಅದನ್ನು ಸ್ವೀಕರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ರಸ್ತೆಗಳಲ್ಲಿ ಸೈಕಲ್ಗಳಿಗೆ ಶುಲ್ಕವಿಲ್ಲದಿದ್ದರೂ, ಈ ಖಾಸಗಿ ಮೂಲಸೌಕರ್ಯದ ಹಾದಿಯಲ್ಲಿ ಸಾಮಾನ್ಯ ಜನರಿಗೂ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂಬುದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಏನು ಹೇಳುತ್ತೆ ನಿಯಮ?
ಸೈಕಲ್ ಸವಾರರೇ ಗಮನಿಸಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಜ್ಯ ರಸ್ತೆ ಅಭಿವೃದ್ಧಿ ನಿಯಮಗಳ ಪ್ರಕಾರ, ಯಾವುದೇ ಕಾರಣಕ್ಕೂ ಸೈಕಲ್ಗಳಿಗೆ ಟೋಲ್ ಶುಲ್ಕ ಪಾವತಿಸುವ ಅಗತ್ಯವಿಲ್ಲ. ದ್ವಿಚಕ್ರ ವಾಹನಗಳಿಗೆ ಕೆಲವು ಎಕ್ಸ್ಪ್ರೆಸ್ವೇಗಳಲ್ಲಿ ವಿನಾಯಿತಿ ಇರದಿದ್ದರೂ, ಸೈಕಲ್ಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೀಗಿದ್ದರೂ ನೈಸ್ ರಸ್ತೆಯ ಸಿಬ್ಬಂದಿ ಸೈಕಲ್ ಸವಾರನಿಗೆ ಟೋಲ್ ಕೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ.

