Bengaluru : ಕೂಲಿ ಕೆಲಸಕ್ಕಾಗಿ ಬೆಂಗಳೂರು ನಗರಕ್ಕೆ ಬಂದ ಯುವಕನೊಬ್ಬ ಕೇವಲ ಎರಡು ದಿನಗಳಲ್ಲೇ ಆತ್ಮ*ಹತ್ಯೆಗೆ ಶರಣಾದ ದಾರುಣ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮೃತನನ್ನು ಜಾರ್ಖಂಡ್ ರಾಜ್ಯದ ಚಾನೋ ಗ್ರಾಮದ ನಿವಾಸಿ ರಾಜು ಪಹರಿಯಾ ಎಂದು ಗುರುತಿಸಲಾಗಿದೆ. ರಾಜು ಏಪ್ರಿಲ್ 11ರಂದು ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿ, ಕೆಂಗೇರಿಯ ದೊಡ್ಡಬೆಲೆ ರಸ್ತೆಯಲ್ಲಿರುವ ಪ್ರಾವಿಡೆಂಟ್ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ಕೇವಲ ಎರಡು ದಿನಗಳಲ್ಲೇ ಆತ್ಮ*ಹತ್ಯೆಗೆ ಶರಣಾಗಿದ್ದಾನೆ. ಈ ಆತ್ಮ*ಹತ್ಯೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ಕ್ರೂರತೆಯನ್ನು ಬಯಲಿಗೆಳೆದಿದೆ.
ವೈಯಕ್ತಿಕ ಸಮಸ್ಯೆಯಿಂದ ಮನನೊಂದು ರಾಜು ಈ ದಾರುಣ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 13ರಂದು ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಘಟನೆಗೆ ಮೊದಲು ರಾಜು ರಸ್ತೆ ಪಕ್ಕದ ಅಂಗಡಿ ಬಳಿ ಕುಳಿತಿದ್ದನು. ಬಳಿಕ ಏಕಾಏಕಿ ಎದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯತ್ತ ಓಡಿ ಹೋಗಿ, ಅದರ ಕೆಳಗೆ ನೆಗೆದಿದ್ದಾನೆ. ಕೆ.ಎ-51-ಎ.ಎಂ-6579 ಸಂಖ್ಯೆಯ ಟಿಪ್ಪರ್ ಲಾರಿಯ ಚಕ್ರಗಳು ರಾಜು ಮೇಲೆ ಹರಿದ ಪರಿಣಾಮ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೂಲಿ ಕೆಲಸಕ್ಕಾಗಿ ದೊಡ್ಡ ನಿರೀಕ್ಷೆಗಳೊಂದಿಗೆ ನಗರಕ್ಕೆ ಬಂದಿದ್ದ ಆತ, ಅಲ್ಪ ಸಮಯದಲ್ಲೇ ಬದುಕಿಗೆ ತೆರೆ ಎಳೆದಿರುವುದು ದುಃಖಕರ ಸಂಗತಿಯಾಗಿದೆ. ಈ ಸಂಬಂಧ ಮೃತನ ಸಂಬಂಧಿ ಪರಮೇಶ್ವರ್ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

