ಗಣಿನಾಡು ಬಳ್ಳಾರಿಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದ್ದು, ಎಪ್ರಿಲ್ 7 ರ ಮಂಗಳವಾರ ಬೆಳ್ಳಂಬೆಳ್ಳಿಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮದ ಜಾಲವನ್ನು ಬಯಲು ಮಾಡಿದ್ದಾರೆ.


ಹತ್ತುವರ್ಷದಿಂದ ಒಂದೇ ಕಡೆಯಲ್ಲಿ ಶಿವಣ್ಣ ಕೆಲಸ ಮಾಡುತ್ತಿದ್ದು, ಇವರ ವಿರುದ್ಧ ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ಶಿವಣ್ಣ ಅವರ ನಿವಾಸ, ಕಚೇರಿ ಮತ್ತು ಅವರು ಬಳಸುವ ಸರಕಾರಿ ಬೊಲೆರೋ ವಾಹನವನ್ನೂ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಸುಮಾರು 12 ಗಂಟೆಗಳ ಸುದೀರ್ಘ ಪರಿಶೀಲನೆಯ ಬಳಿಕ ಕೋಟ್ಯಾಂತರ ರೂ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಪತ್ತೆಯಾದ ಅಕ್ರಮ ಆಸ್ತಿಗಳ ವಿವರ
ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ.
ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್ಗಳು.
ಮನೆಗಳು: ಬಳ್ಳಾರಿ ನಗರದಲ್ಲೇ 3 ಸುಸಜ್ಜಿತ ಮನೆಗಳು.
ನಗದು: ಮನೆಯಲ್ಲಿ 8.5 ಲಕ್ಷ ರೂ. ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಹಣ.
ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ.
ವಾಹನಗಳು: ಮೂರು ದ್ವಿಚಕ್ರ ವಾಹನಗಳು.
ಇವಲ್ಲದೆ ಹಲವು ಬೇನಾಮಿ ಆಸ್ತಿಗಳ ಕುರಿತು ದಾಖಲೆ ದೊರಕಿದ್ದು, ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆ ಮುಂದುವರಿಸಿದೆ.

