Tamilunadu : ದೇಶವನ್ನೇ ಬೆಚ್ಚಿಬೀಳಿಸಿದ್ದ 2020ರ ತಮಿಳುನಾಡಿನ ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ, ಮಧುರೈ ನ್ಯಾಯಾಲಯವು ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ.

ಆರು ವರ್ಷಗಳ ಹಿಂದೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ತೂತುಕುಡಿ ಜಿಲ್ಲೆಯಲ್ಲಿ ವ್ಯಾಪಾರಿ ಪಿ ಜಯರಾಜ್ ಮತ್ತು ಅವರ ಪುತ್ರ ಜೆ ಬೆನಿಕ್ಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಸೋಮವಾರ ಮರಣದಂಡನೆ ವಿಧಿಸಿದೆ.
ಏನಿದು ಘಟನೆ?
ಮೊಬೈಲ್ ಫೋನ್ ಮಾರಾಟದ ಅಂಗಡಿ ನಡೆಸುತ್ತಿದ್ದ ಜಯರಾಜ್, ಮಗ ಬೆನಿಕ್ಸ್ ಲಾಕ್ಡೌನ್ ನಿಯಮ ಉಲ್ಲಂಘಿಸಿ, ನಿಗದಿತ ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೂನ್ 19, 2020ರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರಿಗೆ ಗಂಭೀರವಾದ ಗಾಯಗಳಾಗಿದ್ದವು. ಹೀಗಾಗಿ ಕೋವಿಲ್ಪಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜೂನ್ 23ರಂದು ಮೃತಪಟ್ಟರು. ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ ತಂದೆ, ಮಗ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಈ ಘಟನೆಗೆ ತಮಿಳುನಾಡು ಮಾತ್ರವಲ್ಲದೇ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಮುಂದುವರೆದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಇದರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಅದರಂತೆ, ತನಿಖೆಯಲ್ಲಿ ಅಂದಿನ ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ರಘು ಗಣೇಶ್, ಬಾಲಕೃಷ್ಣನ್ ಸೇರಿದಂತೆ ಒಂಬತ್ತು ಮಂದಿ ಪೊಲೀಸರು ಸಾವಿಗೆ ನೇರ ಕಾರಣ ಎಂದು ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಯಿತು. ಅದರಂತೆ, ಆರೋಪಿಗಳನ್ನು ಮಧುರೈ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ಇನ್ನೂ, ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ನ್ಯಾಯಾಧೀಶರು ಆರೋಪಿಗಳ ಮತ್ತು ಮೃತರ ಕುಟುಂಬದವರ ವಾದವನ್ನು ಆಲಿಸಿದರು.
ಈ ವೇಳೆ ಜಯರಾಜ್ ಅವರ ಪತ್ನಿ ಸೆಲ್ವರಾಣಿ ನ್ಯಾಯಾಲಯದಲ್ಲಿ ಕಣ್ಣೀರಿಡುತ್ತಾ, “ತನ್ನ ಗಂಡ ಮತ್ತು ಮಗ ಯಾವುದೇ ತಪ್ಪು ಮಾಡಿರಲಿಲ್ಲ, ಜೊತೆಗೆ ಅವರ ಮೇಲೆ ಈ ಹಿಂದೆ ಯಾವುದೇ ಪ್ರಕರಣಗಳೂ ಇರಲಿಲ್ಲ. ಹಾಗಾಗಿ, ಅಂತಹ ಅಮಾಯಕರನ್ನು ಠಾಣೆಯಲ್ಲಿ ಹೊಡೆದು ಸಾಯಿಸಿದವರಿಗೆ ಗರಿಷ್ಠ ಶಿಕ್ಷೆ ನೀಡಬೇಕು” ಎಂದರು. ಮತ್ತೊಂದೆಡೆ ಆರೋಪಿ ಪೊಲೀಸರು ತಮ್ಮ ಕುಟುಂಬದ ಹಿನ್ನೆಲೆ ಪರಿಗಣಿಸಿ ಕನಿಷ್ಠ ಶಿಕ್ಷೆ ನೀಡುವಂತೆ ಕೋರಿದ್ದರು. ಆದರೆ ಸಿಬಿಐ ವಕೀಲರು ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಮರಣದಂಡನೆಯೇ ಸೂಕ್ತ ಎಂದು ವಾದಿಸಿದರು.
ಮರಣದಂಡನೆಗೆ ಗುರಿಯಾದ ಪೊಲೀಸ್ ಅಧಿಕಾರಿಗಳು:
ಇನ್ಸ್ಪೆಕ್ಟರ್ ತೇಗು, ಸಬ್-ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್, ರಘು ಗಣೇಶ್, ಮತ್ತು ಇತರ 6 ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಾಮದುರೈ, ಮುತ್ತುರಾಜ್, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್, ವೇಯಿಲ್ ಮುತ್ತು.

