Belagavi : ಅನಾರೋಗ್ಯದಿಂದ ಹೆಂಡತಿ ಮೃತಪಟ್ಟ ಸುದ್ದಿ ತಿಳಿದು ಶಾಕ್ ಆದ ಗಂಡ ಗಡಿಬಿಡಿಯಲ್ಲಿ ದಾರಿಯಲ್ಲಿ ಬರುವಾಗ ತಾನು ಕೂಡ ಅಪಘಾತದಲ್ಲಿ, ಸಾವಿಗೀಡಾದ ಅಮಾನುಷ ಘಟನೆ ಎಂದು ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಧುರಾ ಕರೆಪ್ಪ ಮಾದರ (30) ಕಳೆದ ಹಲವಾರು ವರ್ಷಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹತ್ತಾರು ಚಿಕಿತ್ಸೆ ಪಡೆದರೂ ನೋವು ವಾಸಿಯಾಗಿರಲಿಲ್ಲ. ಭಾನುವಾರ ಹೊಟ್ಟೆನೋವು ಅಸಹನೀಯವಾದಾಗ, ಜೀವನದಲ್ಲಿ ಜಿಗುಪ್ಸೆಗೊಂಡ ಮಧುರಾ ಕ್ರಿಮಿನಾಶಕ ಸೇವಿಸಿದ್ದರು. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಪತ್ನಿ ಮೃತಪಟ್ಟ ಸುದ್ದಿ ತಿಳಿದ ಪತಿ ಕರೆಪ್ಪ ಮಾಧರ (36) ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಆಘಾತ ಮತ್ತು ಅವಸರದಲ್ಲಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾಗ, ಗಂಡನು ಕೂಡ ದುರಂತ ಸಾವನ್ನು ಕಂಡಿದ್ದಾರೆ.
ರಸ್ತೆ ದಾಟುವಾಗ ಅಥವಾ ಅವಸರದಲ್ಲಿ ಬರುವಾಗ ಆಕಸ್ಮಿಕವಾಗಿ ಬಸ್ ಚಕ್ರಕ್ಕೆ ಸಿಲುಕಿದ ಕರೆಪ್ಪ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಒಂದೇ ದಿನ ಮನೆಯ ಯಜಮಾನ ಮತ್ತು ಯಜಮಾನಿ ಇಬ್ಬರೂ ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕಸಾಗರ ಮೂಡಿಸಿದೆ. ಈ ಘಟನೆಯಿಂದಾಗಿ ಮೂವರು ಪುಟ್ಟ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
