ಮೂಡುಬಿದಿರೆ: ಸಾಂಸ್ಕೃತಿಕ ನಗರಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಬೆದ್ರ ಉತ್ಸವ ಸಮಿತಿಯ ಆಶ್ರಯದಲ್ಲಿ 2026ರ ಏಪ್ರಿಲ್ 9 ರಿಂದ 12ರ ವರೆಗೆ ನಾಲ್ಕು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನೊಳಗೊಂಡ ‘ಬೆದ್ರ ಉತ್ಸವ’ ಜರುಗಲಿದೆ ಎಂದು ಬೆದ್ರ ಉತ್ಸವ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಏಪ್ರಿಲ್ 9ರಂದು ಸಂಜೆ 4ಕ್ಕೆ ಆಹಾರ ಮಳಿಗೆ ಹಾಗೂ ಮನೋರಂಜನಾ ಆಟಗಳ ಉದ್ಘಾಟನೆ ನಡೆಯಲಿದೆ. ಅನಿಷಾ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಲಿದ್ದಾರೆ. ನಂತರ ಝೀ ಕನ್ನಡ ‘ಕಾಮಿಡಿ ಕಿಲಾಡಿ’ಗಳಿಂದ ‘ಹಾಸ್ಯ ಸಂಗಮ’ ಹಾಗೂ ರಾತ್ರಿ 9ಕ್ಕೆ ಪ್ರಸಾದ್ ಆಳ್ವ ಕೊಣಾಜೆ ಸಾರಥ್ಯದಲ್ಲಿ ತುಳು ನಾಟಕ ‘ಯೇರ್…?’ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 10ರಂದು ಸಂಜೆ 6ಕ್ಕೆ ಚೇತನ್ ಜೈನ್ ತಂಡದಿಂದ ನೃತ್ಯ ಪ್ರದರ್ಶನವಿದೆ. ರಾತ್ರಿ 7:30ಕ್ಕೆ ಉತ್ಸವದ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗಣೇಶ್ ಬಿ. ಅಳಿಯೂರು ನಿರೂಪಣೆ ಮಾಡಲಿದ್ದಾರೆ. ರಾತ್ರಿ 9ಕ್ಕೆ ಮೋಹನ್ ಹೊಸ್ಕಾರು ನಿರ್ದೇಶನದಲ್ಲಿ ‘ಸಾಂಸ್ಕೃತಿಕ ವೈಭವ’ ಜರುಗಲಿದೆ. ಏಪ್ರಿಲ್ 11ರಂದು ಸಂಜೆ 6ಕ್ಕೆ ಬಾಲ ಪ್ರತಿಭೆಗಳಾದ ಪ್ರಣತಿ ಜೋಶಿ ಮತ್ತು ಪ್ರಜೇತ ಜೋಶಿ ಅವರಿಂದ ಮ್ಯಾಜಿಕ್ ಪ್ರದರ್ಶನವಿದೆ. ಸಂಜೆ 7ಕ್ಕೆ ಝೀ ಕನ್ನಡ ಸರಿಗಮಪ ಕಲಾವಿದರಿಂದ ‘ಸಂಗೀತ ರಸಮಂಜರಿ’ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಭಾಗವಹಿಸಲಿದ್ದಾರೆ. ಏಪ್ರಿಲ್ 12ರಂದು ಸಂಜೆ 6ಕ್ಕೆ ದಿನೇಶ್ ದೇವಾಡಿಗ ಅವರಿಂದ ‘ನಾದ ವೈಭವ’, ಸಂಜೆ 7ಕ್ಕೆ ಸಮಾರೋಪ ಸಮಾರಂಭ ಹಾಗೂ ರಾತ್ರಿ 9ಕ್ಕೆ ಅನೀಶ್ ಎಸ್. ನೇತೃತ್ವದ M.J. STEP-UP ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ವಹಿಸಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಸಮಾರೋಪದಲ್ಲಿ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಡಾ.ಎಂ.ಎನ್. ರಾಜೇಂದ್ರ ಕುಮಾರ್, ಡಾ.ಎಂ. ಮೋಹನ್ ಆಳ್ವ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಡಾ.ಎಂ. ಮೋಹನ್ ಆಳ್ವ, ಕಿಶೋರ್ ಆಳ್ವ ಮತ್ತು ಅಬ್ದುಲ್ ಅಹದ್ ಅವರಿಗೆ ‘ಬೆದ್ರ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಸಮಿತಿಯ ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಡಿಗಾರ್, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಗಣೇಶ್ ಬಿ.ಅಳಿಯೂರು ಉಪಸ್ಥಿತರಿದ್ದರು.
