ಮೂಡಿಗೆರೆ ಮಾ.21: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅನುಮತಿ ಪಡೆಯದೆ ಆಟವಾಡಿದ ಎನ್ನುವ ಕಾರಣಕ್ಕೆ 7 ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್ನಿಂದ ಥಳಿಸಲಾಗಿದೆ. ಶುಕ್ರವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ಸಿಟ್ಟಿನಲ್ಲಿದ್ದ ಪ್ರಿನ್ಸಿಪಾಲ್, ಶನಿವಾರ ಬೆಳಿಗ್ಗೆ ಅನುಮತಿ ಪಡೆಯದೆ ಮೈದಾನದಲ್ಲಿ ಆಟವಾಡುತ್ತಿದ್ದ 7 ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಸೇರಿ ವಿದ್ಯಾರ್ಥಿಗಳ ಕೈಕಾಲುಗಳಿಗೆ ಬಾಸುಂಡೆ ಬರುವ ರೀತಿಯಲ್ಲಿ ಮನಸೋಇಚ್ಛೆ ಥಳಿಸಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ರೂಮಿನೊಳಗೆ ಹಾಕಿ ಬೀಗ ಹಾಕಿದ್ದಾರೆ.
ವಸತಿ ಶಾಲೆಯ ರೂಮಿನಲ್ಲಿ ವಿದ್ಯಾರ್ಥಿಗಳ ಕಿರುಚಾಟ, ಅಳು ಕೇಳಿ ಪಕ್ಕದ ಕಾಫಿ ತೋಟದ ಕಾರ್ಮಿಕರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರೂಮಿನಲ್ಲಿದ್ದ 7 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದು, ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಅವರ ಹೆಸರನ್ನು ಪೊಲೀಸರಿಗೆ ಹೇಳಿದ್ದು, ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

