Home » ಮಂಗಳೂರು: ಕಾರಿನಲ್ಲಿ ಸ್ಕೂಟರಿಗೆ ಡಿಕ್ಕಿ ಮಾಡಿ ಕೊಲೆಗೆ ಯತ್ನ; ವ್ಯಕ್ತಿ ಸೆರೆ

ಮಂಗಳೂರು: ಕಾರಿನಲ್ಲಿ ಸ್ಕೂಟರಿಗೆ ಡಿಕ್ಕಿ ಮಾಡಿ ಕೊಲೆಗೆ ಯತ್ನ; ವ್ಯಕ್ತಿ ಸೆರೆ

0 comments

ಮಂಗಳೂರು ಮಾ.17: ಭೂ ವ್ಯವಹಾರದಲ್ಲಿನ ವೈಷಮ್ಯದಿಂದ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಡಿಕ್ಕಿ ಮಾಡಿ ಕೊಲೆಗೆ ಯತ್ನ ಮಾಡಿದ ಘಟನೆ ನಗರದ ಆರ್ಯ ಸಮಾಜ ರಸ್ತೆಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಆರೋಪಿ ಫಳ್ನೀರ್‌ ನಿವಾಸಿ ಮಹಮ್ಮದ್‌ ಶರೀಫ್‌ (26) ಎನ್ನುವಾತ ಬಂಧಿತ ವ್ಯಕ್ತಿ. ಮಲ್ಲಿಕಟ್ಟೆ ನಿವಾಸಿ ಮೋಹನದಾಸ್‌ ಶೆಟ್ಟಿ (56) ಎನ್ನುವವರಿಗೆ ಕಾರಿನಲ್ಲಿ ಡಿಕ್ಕಿ ಮಾಡಿ ಗಂಭೀರ ಗಾಯಗೊಳಿಸಿರುವ ಆರೋಪ ಈತನ ಮೇಲಿದೆ. ಮೋಹನದಾಸ್‌ ಶೆಟ್ಟಿ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಮ್ಮದ್‌ ಶರೀಫ್‌ ಮತ್ತು ಆತನ ತಂದೆ ಮಹಮ್ಮದ್‌ ಇಕ್ಬಾಲ್‌ ಎನ್ನುವವರ ಜೊತೆಗೆ ಮೋಹನದಾಸ್‌ ಶೆಟ್ಟಿಗೆ ಭೂ ವ್ಯವಹಾರವಿದ್ದು, ಸುರತ್ಕಲ್‌ನ ಕಾನ ಮತ್ತು ವಾಮಂಜೂರಿನಲ್ಲಿ ಎರಡು ಕೋಟಿ ಮೌಲ್ಯದ ಜಾಗವನ್ನು ಖರೀದಿ ಹೂಡಿಕೆ ಮಾಡಿದ್ದರು. ವ್ಯವಹಾರದಲ್ಲಿ ಮೋಹನ್‌ದಾಸ್‌ ಶೆಟ್ಟಿ ಮೋಸ ಮಾಡಿದ ಸಿಟ್ಟಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ಮಾಡಿದ್ದರು.

ಈ ವೇಳೆ, ಮೋಹನದಾಸ ಶೆಟ್ಟಿಯವರ ಮೊಬೈಲ್‌ ಕಸಿದಿದ್ದು, ನಂತರ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುವಾಗ ಆರೋಪಿ ವ್ಯಕ್ತಿ ತನ್ನ ಕಾರನ್ನು ಅತಿವೇಗದಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಗುದ್ದಿ ಕೊಲೆಗೆ ಯತ್ನ ಮಾಡಿದ್ದಾನೆ.

banner

ಈ ಘಟನೆ ಸಂಬಂಧ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಮಹಮ್ಮದ್‌ ಶರೀಫ್‌ ಎನ್ನುವಾತನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದಾರೆ. ಘಟನೆಗೆ ಸಂಬಂಧಪಟ್ಟ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.

You may also like