ಬಸ್ ನಿಲ್ದಾಣದಲ್ಲಿ ಗಂಡನನ್ನು ಪಕೋಡಾ ತರುವಂತೆ ಕಳುಹಿಸಿದ ಪತ್ನಿಯೋರ್ವಳು ಆತ ಪಕೋಡ ತರುವುದಕ್ಕೆ ಹೋಗುತ್ತಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ನವವಧು ಗಂಡನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅಮ್ರೋಹಾ ಜಿಲ್ಲೆಯ ನಿವಾಸಿಯಾದ ಪ್ರೀತಂ ಸಿಂಗ್ ಎನ್ನುವ ವ್ಯಕ್ತಿಗೆ ರಾಮ್ಪುರ ಜಿಲ್ಲೆಯ ಯುವತಿ 18 ವರ್ಷದ ರಿಮ್ಜಿಮ್ ಜೊತೆ ಡಿಸೆಂಬರ್ 1 2025 ರಂದು ಅಂದರೆ ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿತ್ತು.
ಈ ಬಾರಿಯ ಹೋಳಿ ಹಬ್ಬದಂದು ತನ್ನ ಪೋಷಕರ ಮನೆಗೆ ಹೋಗಿದ್ದಳು. ಹಬ್ಬವೆಲ್ಲ ಮುಗಿದ ನಂತರ ಪ್ರೀತಂ, ರಿಮ್ಜಿಮ್ ಜೊತೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದಾನೆ. ಪ್ರಯಾಣದ ಮಧ್ಯೆ ಇಬ್ಬರೂ ಬಿಲಾರಿ ಬಸ್ ನಿಲ್ದಾಣದಲ್ಲಿ ಇಳಿದು ಮುಂದಿನ ಬಸ್ಗಾಗಿ ಕಾಯುತ್ತಿದ್ದಾಗ ರಿಮ್ಜಿಮ್ ತನಗೆ ಹಸಿವಾಗುತ್ತಿದೆ ಏನನ್ನಾದರೂ ಬಿಸಿಬಿಸಿಯಾಗಿ ತಿನ್ನುವುದಕ್ಕೆ ತನಿ ಎಂದು ಹೇಳಿದ್ದಾಳೆ. ಪಾಪ, ಪತಿ ತನ್ನ ಪತ್ನಿಯ ಹೊಟ್ಟೆ ಹಸಿವು ನೋಡಿ ತಾಳಲಾರದೆ ಪಕೋಡಾ ತರುವುದಕ್ಕೆ ಹೋಗಿದ್ದಾನೆ. ಇದಾಗಿ ಕೆಲ ನಿಮಿಷದಲ್ಲೇ ವಾಪಸ್ ಬಂದಾಗ ರಿಮ್ಜಿಮ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಪ್ರೀತಂ ಮೊದಲಿಗೆ ಪತ್ನಿ ಇಲ್ಲೇ ಹತ್ತಿರದಲ್ಲೇ ಇರಬಹುದು ಎಂದು ಕಾದಿದ್ದು, ನಂತರ ಸುತ್ತಮುತ್ತ ಹುಡುಕಾಡಿದ್ದಾನೆ. ನಂತರ ಗಾಬರಿಗೊಂಡ ಪ್ರೀತಂ ಪೊಲೀಸ್ ಠಾಣೆಗೆ ಹೋಗಿ ತನ್ನ ಪತ್ನಿ ನಾಪತ್ತೆಯಾಗಿರುವುದರ ಕುರಿತು ದೂರು ದಾಖಲಿಸಿದ್ದಾನೆ. ತನ್ನ ಪತ್ನಿ ಆಕೆಯ ತವರೂರಿನ ಸಮೀಪದ ಯುವಕನ ಜೊತೆ ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ಪೊಲೀಸರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.
ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಆಕೆಯ ಮೊಬೈಲ್ ಫೋನ್ ಲೊಕೇಶನ್ ಟ್ರೇಸ್ ಮಾಡುವ ಮೂಲಕ ಆಕೆ ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಲು ಪ್ರಯತ್ನ ಪಡುತ್ತಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

