Kadaba: ತಮ್ಮ ತೋಟದಲ್ಲಿ ಬೇರೆಯವರ ಜಾನುವಾರುಗಳು ಮೇಯುತ್ತಿರುವುದನ್ನು ಕಂಡು ಅವುಗಳನ್ನು ಓಡಿಸಲು ಹೋದ ವೇಳೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಕಡಬದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರು ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ 64 ವರ್ಷದ ಲೀಲಾವತಿ ಶೆಟ್ಟಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮಾರ್ಚ್ 11ರಂದು ಸಂಜೆ ತಮ್ಮ ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಲೀಲಾವತಿ ಶೆಟ್ಟಿ ಹೊರಟಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲೀಲಾವತಿ ಅವರ ಪುತ್ರ ರಾತ್ರಿ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಕಂಡುಬಂದಿದೆ. ಆದರೆ ತಾಯಿ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು ನೆರೆಮನೆಯವರ ಸಹಾಯದಿಂದ ಹುಡುಕಾಟ ಆರಂಭಿಸಿದಾಗ ತಮ್ಮ ತೋಟದಲ್ಲಿ ಲೀಲಾವತಿ ಶೆಟ್ಟಿ ಅವರು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.

