ಮಾರ್ಚ್ 3 ರಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ.
ಬೇಲೂರು ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ನಾಳೆ ಬಂದ್
ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೇಲೂರೂ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ನಾಳೆ (ಮಾರ್ಚ್ 3)ಗ್ರಹಣದ ಪ್ರಯುಕ್ತ ತಾತ್ಕಾಲಿಕ ಬಂದ್ ಮಾಡಲಾಗುತ್ತಿದೆ. ಮಾರ್ಚ್ 3 ರ ಬೆಳಿಗ್ಗೆ 9 ಗಂಟೆಯೊಳಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಹಾಕಲಾಗುವುದ. ಗ್ರಹಣ ಮುಗಿದ ನಂತರ ರಾತ್ರಿ 7 ಗಂಟೆಯ ಬಳಿಕ ದೇವಾಲಯದಲ್ಲಿ ಆಲಯ ಅರ್ಚನೆ, ಅಭಿಷೇಕ, ಸಂಪ್ರೋಕ್ಷಣೆ ಕಾರ್ಯಗಳು ನಡೆಯಲಿದೆ.
ಬೆಂಗಳೂರಿನಲ್ಲಿ ಬಹುತೇಕ ದೇವಾಲಯಗಳ ಬಾಗಿಲನ್ನು ನಾಳೆ (ಮಾ.3) ಮುಚ್ಚಲಾಗುತ್ತಿದೆ. ಹಲಸೂರು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಸರಿಯಾಗಿ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ಗ್ರಹಣ ಮುಗಿದ ನಂತರ ಸಂಜೆ 7 ಗಂಟೆಗೆ ಬಾಗಿಲು ತೆರೆಯಲಿದೆ. 9 ಗಂಟೆಯ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇಗುಲವನ್ನು ಬಂದ್ ಮಾಡಲಾಗುವುದು. ರಾಜಧಾನಿಯ ಗವಿ ಗಂಗಾಧರೇಶ್ವರ, ಬನಶಂಕರಿ ಅಮ್ಮನವರ ದೇವಾಲಯ ಸೇರಿದಂತೆ ಇತರ ದೊಡ್ಡ ದೇಗುಲಗಳಲ್ಲೂ ಇದೇ ರೀತಿಯ ಸಮಯದ ಬದಲಾವಣೆ ಇರಲಿದೆ.
ಧರ್ಮಸ್ಥಳ:
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಿಗ್ಗಿನ ಪೂಜೆಗಳೆಲ್ಲವೂ 1.30 ರ ಒಳಗಾಗಿ ಮುಕ್ತಾಯವಾಗಲಿದೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2.00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಸಂಜೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುಧೀಕರಣ, ಅಭಿಷೇಕದ ನಂತರ ರಾತ್ರಿ 7.30 ರ ನಂತರ ಭಕ್ತರಿಗೆ ದೇವರ ದರ್ಶನ ಸಿಗಲಿದೆ. ಬಳಿ ಎಂದಿನಂತೆ ರಾತ್ರಿಯ ಅನ್ನಪ್ರಸಾದ ವಿತರಣೆಯೂ ಪ್ರಾರಂಭವಾಗಲಿದೆ.
ಬೆಂಗಳೂರಿನ ಐತಿಹಾಸಿಕ ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲನ್ನು ಮುಚ್ಚದಿರಲು ನಿರ್ಧಾರ ಮಾಡಲಾಗಿದೆ. ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣವಿರುವುದರಿಂದ ಬೆಳಿಗ್ಗೆ 6.00 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ರಾತ್ರಿ 9 ಗಂಟೆಯವರೆಗೆ ಸತತವಾಗಿ ದರ್ಶನ್ಕೆ ಅವಕಾಶವಿದೆ. ಮಧ್ಯಾಹ್ನ 3.00 ರಿಂದ ಸಂಜೆ 6.00 ಗಂಟೆಯವರೆಗೆ ಚಂದ್ರಗ್ರಹಣ ದೋಷ ನಿವಾರಣೆಗೆ ಚಂದ್ರಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿದೆ. ಕಳಸದ ತೀರ್ಥವನ್ನು ಬಂಡೆ ಮಹಾಂಕಾಳಿಗೆ ಅಭಿಷೇಕ ಮಾಡಲಾಗುತ್ತದೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ದೇವಾಲಯದ ಬಾಗಿಲು ಬಂದ್ ಆಗುವುದಿಲ್ಲ. ಭಕ್ತರು ಎಂದಿನಂತೆ ಮಾದಪ್ಪನ ದರ್ಶನ ಪಡೆಯಬಹುದು. ಗ್ರಹಣ ಕಾಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಬಿಳಿಗಿರಿ ರಂಗನಾಥನ ಸನ್ನಿಧಿಯಲ್ಲಿ ಗ್ರಹಣದ ಸೂತಕ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ. ಮಾರ್ಚ್ 3 ರ ಸುರ್ಯೋದಯದಿಂದ ಗ್ರಹಣ ಮುಕ್ತಾಯ ಆಗುವವರೆಗೆ ಎಂದಿನಂತೆ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಬಹುದಾಗಿದೆ. ಗ್ರಹಣದ ಅವಧಿಯಲ್ಲಿ ಶ್ರೀ ಮಠದಲ್ಲಿ ವಿಶೇಷ ಪೂಜೆಗಳು, ಹರಕೆ ಸೇವೆಗಳು, ಪರ್ವ ಕಾಲದ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ. ಅಲಂಕಾರಗಳನ್ನು ರಾಯ ಮೂಲ ಬೃಂದಾವನಕ್ಕೆ ಮಾಡಲಾಗುವುದಿಲ್ಲ. ಜಲಾಭಿಷೇಕ ಮಾತ್ರ ಇರುತ್ತದೆ. ಊಟದ ವ್ಯವಸ್ಥೆ ಇರುವುದಿಲ್ಲ. ತೀರ್ಥ ಪ್ರಸಾದ ಮಾತ್ರ ಇರುತ್ತದೆ.

