

Alipura: ಇರಾನ್ (Iran) ಮೇಲೆ ಇಸ್ರೇಲ್ (Isrel) ಹಾಗೂ ಅಮೆರಿಕಾ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಹತ್ಯೆ ಮಾಡಲಾಗಿದೆ. ಇದರ ಬೆನ್ನೆಲೆ ಕರ್ನಾಟಕದ ಈ ಊರಲ್ಲಿ ಖಮೇನಿ ಸಾವಿಗೆ ಗ್ರಾಮಸ್ಥರೆಲ್ಲರೂ ಕಣ್ಣೀರು ಹಾಕಿದ್ದು ಇಡೀ ಗ್ರಾಮವನ್ನು ಬಂದ್ ಮಾಡಿದ್ದಾರೆ.
ಯಸ್, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸ್ತಬ್ಧಗೊಂಡಿದೆ. ಯಾಕೆಂದರೆ ಕರ್ನಾಟಕದ ಈ ಊರಿಗೂ ಇರಾನ್ ಸುಪ್ರೀಂ ನಾಯಕ ಖಮೇನಿ ಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ನೆಚ್ಚಿನ ಧಾರ್ಮಿಕ ನಾಯಕನ ಸಾವಿನಿಂದ ಕಂಗಾಲಾಗಿರುವ ಸ್ಥಳೀಯ ಶಿಯಾ ಮುಸ್ಲಿಮರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ಆಚರಿಸುತ್ತಿದ್ದಾರೆ.
ಅಲೀಪುರ-ಇರಾನ್ ಬಾಂಧವ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರವು ಈ ಹಿಂದೆ ‘ಬೆಳ್ಳಿಕುಂಟೆ’ ಎಂದು ಕರೆಯಲ್ಪಡುತ್ತಿತ್ತು. ಈ ಗ್ರಾಮವು ಬಿಜಾಪುರದ ಆದಿಲ್ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ ‘ಅಲೀಪುರ’ವಾಗಿ ರೂಪಾಂತರಗೊಂಡಿತು ಎನ್ನುವುದು ಇತಿಹಾಸ.
ಗ್ರಾಮದ ಪ್ರತಿಯೊಬ್ಬರಿಗೂ ಇರಾನ್ ಮತ್ತು ಅರಬ್ ದೇಶಗಳೊಂದಿಗೆ ವ್ಯಾಪಾರ ಹಾಗೂ ಶಿಕ್ಷಣದ ಗಾಢ ಸಂಬಂಧವಿದೆ. ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣವಾಗಿದೆ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರೇ ಹೆಚ್ಚಿದ್ದಾರೆ. ಇಲ್ಲಿನ ಜನರು ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಪಾಲಿಸುತ್ತಿದ್ದರು. ಇಲ್ಲಿನ ಜನರಿಗೆ ಖಮೇನಿ ಧರ್ಮಗುರುವಾಗಿದ್ರು. ಖಮೇನಿ ತತ್ವ ಪಾಲಿಸುವ ದೊಡ್ಡ ಬಳಗವೇ ಇಲ್ಲಿದೆ.
1986ರಲ್ಲಿ ಅಲೀಪುರಕ್ಕೆ ಖಮೇನಿ ಭೇಟಿ
ಈ ಭೇಟಿಯೇ ಇರಾನ್ ಮತ್ತು ಅಲೀಪುರದ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಇರಾನ್ ಧಾರ್ಮಿಕ ನಾಯಕ ಹಾಗೂ ಅಯಾತೊಲ್ಲಾ ಅಲಿ ಖಮೇನಿ ಅವರ ಗುರು ಅಯಾತೊಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಸಹ ನಿರ್ಮಾಣವಾಗಿದೆ. ಈ ಆಸ್ಪತ್ರೆಯ ಉದ್ಘಾಟನೆಗಾಗಿಯೇ ಅಯಾತೊಲ್ಲಾ ಅಲಿ ಖಮೇನಿ ಅಲೀಪುರಕ್ಕೆ ಬಂದಿದ್ದರು.
ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಪ್ರವಾಸದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರು ಪ್ರಮುಖವಾಗಿ ಇರಾನ್ ಅವಲಂಬಿಸಿದ್ದಾರೆ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ‘ಇರಾನ್’ ನಮ್ಮ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಇರಾನ್ನ ಪರಮೋಚ್ಛನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಧಾರ್ಮಿಕ ಆದೇಶಗಳನ್ನು ಪಾಲಿಸುವ ದೊಡ್ಡ ಜನ ವರ್ಗವೇ ಇಲ್ಲಿದೆ.
