

Delhi : ಮದ್ಯ ನೀತಿ ಹಗರಣದ ಭ್ರಷ್ಟಾಚಾರದ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.
ಹೌದು, ರಾಜಕಾರಣದಲ್ಲಿ ಈಗೊಂದು ಭಾರಿ ದೊಡ್ಡ ಬೆಳವಣಿಗೆ ನಡೆದಿದೆ. ಬಹುಚರ್ಚಿತ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ದೆಹಲಿ ನ್ಯಾಯಾಲಯವು ಸಂಪೂರ್ಣವಾಗಿ ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿದೆ (Acquitted). ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ತೀರ್ಪು ಪ್ರಕಟವಾಗಿದೆ.
ಪ್ರಕರಣದ ಹಿನ್ನೆಲೆ
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸುದೀರ್ಘ ಕಾನೂನು ಹೋರಾಟವು ಅಂತಿಮವಾಗಿ ಸುಖಾಂತ್ಯ ಕಂಡಿದೆ. ದೆಹಲಿ ನ್ಯಾಯಾಲಯವು ಅವರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟಾಚಾರದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ಈ ಪ್ರಕರಣವು ಅಕ್ಟೋಬರ್ 2023 ರಲ್ಲಿ ಜಾರಿ ನಿರ್ದೇಶನಾಲಯ (ED) ನೀಡಿದ ಮೊದಲ ಸಮನ್ಸ್ನೊಂದಿಗೆ ಆರಂಭವಾಗಿತ್ತು. ಆರಂಭದಲ್ಲಿ ಇದನ್ನು ರಾಜಕೀಯ ಪಿತೂರಿ ಎಂದು ಕರೆದಿದ್ದ ಕೇಜ್ರಿವಾಲ್, ಸತತ 9 ಸಮನ್ಸ್ಗಳನ್ನು ಕೈಬಿಟ್ಟಿದ್ದರು. ಇದರಿಂದಾಗಿ 2024ರ ಮಾರ್ಚ್ 21ರಂದು ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಅಧಿಕೃತವಾಗಿ ಬಂಧಿಸಿದ್ದರು.
ಬಂಧನದ ನಂತರ ಪ್ರಕರಣವು ಹಲವು ತಿರುವುಗಳನ್ನು ಪಡೆಯಿತು. ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ 2024ರ ಮೇ 10ರಲ್ಲಿ ಸುಪ್ರೀಂಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಜೂನ್ನಲ್ಲಿ ಅವರು ಮತ್ತೆ ತಿಹಾರ್ ಜೈಲಿಗೆ ಶರಣಾಗಬೇಕಾಯಿತು. ಇದೇ ಸಮಯದಲ್ಲಿ ಸಿಬಿಐ (CBI) ಕೂಡ ಅವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿತ್ತು. ಸೆಪ್ಟೆಂಬರ್ 13ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಅಂದಿನಿಂದ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಸತತವಾಗಿ ನಡೆಯುತ್ತಿತ್ತು. ಅಂತಿಮವಾಗಿ ತೀರ್ಪು ಪ್ರಕಟಿಸಿದ ದೆಹಲಿ ನ್ಯಾಯಾಲಯವು, ಸಿಬಿಐ ಸಲ್ಲಿಸಿದ್ದ ಆರೋಪಗಳಲ್ಲಿ ಯಾವುದೇ ಪುರಾವೆಗಳಿಲ್ಲ ಮತ್ತು ಕ್ರಿಮಿನಲ್ ಪಿತೂರಿ ನಡೆದ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಯಾವಾಗ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತೋ, ಆ ಕ್ಷಣದಲ್ಲಿ ಕೇಜ್ರಿವಾಲ್ ಕಣ್ಣೀರು ಹಾಕಿದ್ದಾರೆ. “ನನ್ನನ್ನು ಮನೆಯಿಂದಲೇ ಎತ್ತಾಕಿಕೊಂಡು ಹೋಗಿ ಜೈಲಿಗೆ ಹಾಕಿದ್ರು. ಆದ್ರೆ ಅದು ನನ್ನನ್ನ ಕುಗ್ಗಿಸಲಿಲ್ಲ. ಇವತ್ತು ಕೋರ್ಟ್ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದಾಗ ಭಾವುಕನಾದೆ” ಅಂತ ತಮ್ಮ ಕಷ್ಟದ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
