

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿ ನೀಡದ ವಿಧಾನಸಭಾ ಕ್ಷೇತ್ರಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ನಿಗಮಗಳ ಅಡಿ ನೀಡುವ ಯೋಜನೆಗಳು, ಉದಾ: ಗಂಗಾಕಲ್ಯಾಣ ಬೋರ್ವೆಲ್, ತ್ರಿಚಕ್ರ ವಾಹನ, ನಿರುದ್ಯೋಗಿಗಳಿಗೆ ಕಾರು ಮತ್ತಿತರ ಸೌಲಭ್ಯ ಪಡೆಯಲು ಫಲಾನುಭವಿಗಳನ್ನು ಆಯ್ಕೆ ಮಾಡಿ ಶಾಸಕರು ಪಟ್ಟಿ ನೀಡಬೇಕು. ಆದರೆ, ಕೆಲ ಕ್ಷೇತ್ರಗಳ ಶಾಸಕರು ಪಟ್ಟಿ ನೀಡುತ್ತಿಲ್ಲ. ಹೀಗಾಗಿ ಇಂಥ ಕ್ಷೇತ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಪಟ್ಟಿ ಸಿದ್ಧಪಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2026-27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಸಿಆರ್ಟಿಎಂ ಮಾದರಿಯಲ್ಲಿ ಅನುಷ್ಠಾನಗೊಳಿಸಲೂ ಸಂಪುಟ ಒಪ್ಪಿಗೆ ನೀಡಿದೆ. ಸಂಪೂರ್ಣ ಅಪಾಯ ವರ್ಗಾವಣೆ ಮಾದರಿಯಿಂದ ಬೆಂಕಿ ಅವಘಡ, ವಿಪತ್ತು ಸಂದರ್ಭದಲ್ಲಿ ಬೆಳೆ ಹಾನಿ ಉಂಟಾದರೆ ಅಡ್ಡಪರಿಣಾಮ ಎದುರಿಸಿರುವ ಇಡೀ ಊರಿನ ಎಲ್ಲ ಬೆಳೆಗಾರರಿಗೂ ಪರಿಹಾರ ದೊರೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು ಎಂದು ಎಷ್ಯಾನೆಟ್ ಕನ್ನಡ ವರದಿ ಮಾಡಿದೆ.