

Ranaveer Singh: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರ ದೈವವನ್ನು ಅಣಕಿಸಿದ ವಿಚಾರವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆ ಬಳಿಕ ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು ಇದೀಗ ಆ ಕುರಿತಾದ ಅಪ್ಡೇಟ್ ಒಂದು ಹೊರಬಿದ್ದಿದ್ದು, ಕೋರ್ಟ್ ರನ್ವೀರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರದ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೆ ರಿಷಬ್ ಶೆಟ್ಟಿ ನಟನೆಯನ್ನು ಕಣ್ಣಗಲಿಸಿ ತಮಾಷೆ ಕೂಡ ಮಾಡಿದ್ದರು. ಇದು ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ರಣವೀರ್ ಸಿಂಗ್ ಅವರು ನನ್ನದು ತಪ್ಪಾಯಿತು ಕ್ಷಮಿಸಿ ಎಂದು ಕ್ಷಮೆ ಕೋರಿದ್ದರು. ಈ ವಿಚಾರವಾಗಿ ರಣವೀರ್ ಸಿಂಗ್ ಮೇಲೆ FIR ದಾಖಲಾಗಿತ್ತು. ರಣವೀರ್ ಸಿಂಗ್ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು .
ರಣವೀರ್ ಸಿಂಗ್ ಪರ ವಕೀಲರರು ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಹೇಳಿ, ಕಾಂತಾರಾ ಚಾಪ್ಟರ್ -1 ರ ಪಾತ್ರದ ಬಗ್ಗೆ ರಣವೀರ್ ಸಿಂಗ್ ಶ್ಲಾಘಿಸಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ನಟನೆ ಬಗ್ಗೆ ರಣವೀರ್ ಸಿಂಗ್ ಪ್ರಾಮಾಣಿಕವಾಗಿ ಹೊಗಳಿದ್ದಾರೆ. ಆದ್ರೆ ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ ಎಂದು ವಕೀಲರು ವಾದಿಸಿದ್ದಾರೆ. ರಣವೀರ್ ಸಿಂಗ್ ಪರ ವಕೀಲರು ಇಂದೇ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿದಾಗ, ಹೈಕೋರ್ಟ್ ಇದಕ್ಕೆ ಪ್ರಶ್ನೆಯೊಂದನ್ನು ಕೇಳಿದೆ. ನ್ಯಾಯಮೂರ್ತಿಗಳು, ಬಾಲಿವುಡ್ ನಟನಾದರೆ ಮಧ್ಯಾಹ್ನವೇ ವಿಚಾರಣೆ ನಡೆಸಬೇಕೇ? ಹಾಲಿವುಡ್ ನಟನಾದರೆ ತಕ್ಷಣವೇ ವಿಚಾರಣೆ ನಡೆಸಬೇಕೇ? ಎಂದು ಪ್ರಶ್ನೆ ಮಡುವ ಮೂಲಕ ರಣವೀರ್ ಸಿಂಗ್ ಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.