

DK Shivkumar : ಅನುದಾನಕ್ಕಾಗಿ ಬ್ಲಾಕ್ ಮೇಲ್ ಡಿಮ್ಯಾಂಡ್ ಮಾಡಿದರೆ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ವಿಜಯೇಂದ್ರ ಅವರ ಮನೆ ಮುಂದೆ ಕಸ ಸುರಿಸುತ್ತೇನೆ ಎಂಬುದಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಾರ್ನಿಂಗ್ ಮಾಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ತಲೆದೂರಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಮಂಕಲಾಳ ಬಳಿ ಹೆಚ್ಚುವರಿ ಕಸದ ಲಾರಿ ಕಳುಹಿಸದಕ್ಕಾಗಿ ಗ್ರಾಮಸ್ಥರು ಮತ್ತು ಸ್ಥಳೀಯ ಶಾಸಕ ಲಾರಿಗಳ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಬಿಜೆಪಿಯ ಎಲ್ಲಾ ಶಾಸಕರು ಕಸದ ನೆಪವೊಡ್ಡಿ ಬ್ಲ್ಯಾಕ್ಮೇಲ್ ತಂತ್ರಕ್ಕೆ ಇಳಿದಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ಇತ್ತೀಚೆಗೆ ನಡೆದ ಅಪಘಾತದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲರೂ ಗೌರವದಿಂದ ವರ್ತಿಸಿದರೆ ಸರಿ, ಇಲ್ಲದಿದ್ದರೆ ನಾವು ಕರುಣೆ ತೋರಿಸುವುದಿಲ್ಲ,” ಎಂದು ಎಚ್ಚರಿಸಿದರು.
ಅಲ್ಲದೆ ಕಸದ ವಿಲೇವಾರಿಗೆ ಅಡ್ಡಿಪಡಿಸುತ್ತಿರುವ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ನಗರದ ಕಸವನ್ನು ಎಲ್ಲಾದರೂ ಒಂದು ಕಡೆ ವಿಲೇವಾರಿ ಮಾಡಲೇಬೇಕು. ಅಲ್ಲೂ ಬೇಡ, ಇಲ್ಲೂ ಬೇಡ ಎಂದರೆ ಕಸವನ್ನು ಎಲ್ಲಿಗೆ ಹಾಕಬೇಕು? ಸುಮ್ಮನೆ ತಕರಾರು ತೆಗೆದರೆ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿಯ ಮುಂದೆಯೇ ಕಸದ ರಾಶಿ ಹಾಕಿಸಬೇಕಾಗುತ್ತದೆ,” ಎಂದು ವಾರ್ನಿಂಗ್ ನೀಡಿದರು.