

Yogi Adityanath: ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಕನಸಿನಲ್ಲಿಯೂ ಕೂಡ ಭಾವಿಸಬೇಡಿ. ಭೂಮಿ ಪ್ರಳಯವಾಗುವರೆಗೂ ಕೂಡ ಅದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi) ಅವರು ಮಂಗಳವಾರ (ಫೆ.10) ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬರಾಬಂಕಿಯ ಶ್ರೀರಾಮ ಜನಕಿ ದೇವಸ್ಥಾನದಲ್ಲಿ ಆಯೋಜಿಸಲಾದ 10ನೇ ಶ್ರೀ ಹನುಮಾನ್ ವಿರಾಟ್ ಮಹಾಯಜ್ಞ ಹಾಗೂ ಶ್ರೀ ರಾಮಾರ್ಚನಾ ಪೂಜೆಯ ವೇಳೆ ಬಾಬ್ರಿ ಮಸೀದಿ ಕುರಿತು ಮಾತನಾಡಿದ ಯೋಗಿ, “ಇಂದು ಮತ್ತೆ ಹೇಳುತ್ತಿದ್ದೇವೆ – ಕಯಾಮತ್ ದಿನದವರೆಗೆ. ಆ ದಿನವೇ ಬರಲಿಲ್ಲ ಅಂದರೆ, ಬಾಬ್ರಿ ರಚನೆಯ ಪುನರ್ ನಿರ್ಮಾಣವೂ ಎಂದಿಗೂ ನಡೆಯುವುದಿಲ್ಲ. ಅದನ್ನು ಕನಸು ಕಾಣುವವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ” ಎಂದು ಹೇಳಿದರು.
ತಮ್ಮ ಸರ್ಕಾರವು ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ, ಕೃತಿಯಲ್ಲಿ ನಂಬಿಕೆ ಇಟ್ಟಿದೆ ಎಂದು ಯೋಗಿ ಪ್ರತಿಪಾದಿಸಿದ್ದಾರೆ. ನಮ್ಮ ಸರ್ಕಾರ ಏನು ಹೇಳುತ್ತದೋ ಅದನ್ನೇ ಮಾಡುತ್ತದೆ. ರಾಮ ಲಲ್ಲಾ, ನಾವು ಬರುತ್ತೇವೆ, ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ ಎಂದು ನಾವು ಹೇಳಿದ್ದೆವು. ಇಂದು ಭವ್ಯವಾದ ರಾಮ ಮಂದಿರ ತಲೆ ಎತ್ತಿ ನಿಂತಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ನುಡಿದಿದ್ದಾರೆ.
ಅಲ್ಲದೆ ಸಂಕಷ್ಟ ಬಂದಾಗ ಮಾತ್ರ ರಾಮನನ್ನು ನೆನೆಯುವ ಅವಕಾಶವಾದಿಗಳ ವಿರುದ್ಧ ಸಿಎಂ ಯೋಗಿ ಕಿಡಿಕಾರಿದ್ದಾರೆ. ರಾಮ ಭಕ್ತರ ಮೇಲೆ ಹಿಂದೆ ಗುಂಡು ಹಾರಿಸಿದವರಿಗೆ ಅಥವಾ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿದವರಿಗೆ ಇಲ್ಲಿ ಜಾಗವಿಲ್ಲ. ಅಂತಹವರನ್ನು ಸ್ವತಃ ಶ್ರೀರಾಮನೇ ಮರೆತಿದ್ದಾನೆ ಎಂದು ಯೋಗಿ ಪರೋಕ್ಷವಾಗಿ ವಿರೋಧ ಪಕ್ಷಗಳನ್ನು ಕುಟುಕಿದ್ದಾರೆ.













