

KSRTC : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ ಗಳ ಮೇಲೆ ಅಂಟಿಸಿರುವಂತಹ ತಂಬಾಕು ಅಥವಾ ಚಪ್ಪಲಿಗಳ ಜಾಹೀರಾತುಗಳನ್ನು ತೆಗೆಯುವ ಅಭಿಯಾನವನ್ನು ಕೆಲವು ಸಂಘಟನೆಗಳು ಹಾಗೂ ಯುವಕರು ಕೈಗೊಂಡಿದ್ದಾರೆ. ಸರ್ಕಾರ ಕೂಡ ಇದಕ್ಕೆ ಸಾತ್ ನೀಡಿ ಬಸ್ಸುಗಳ ಮೇಲೆ ಅಂಟಿಸಿರುವ ಜಾಹೀರಾತುಗಳನ್ನು ತೆಗೆಯಲು 15 ದಿನಗಳ ಕಾಲ ಗಡುವನ್ನು ನೀಡಿತ್ತು. ಆದರೆ ಇದೀಗ ಇಂಥವರ ಮೇಲೆ ಎಫ್ಐಆರ್ ದಾಖಲಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಸರ್ಕಾರಿ ಸಾರಿಗೆ ಬಸ್ಗಳ ಮೇಲೆ ತಂಬಾಕು ಜಾಹೀರಾತು (Tobacco Advertising) ಸಂಬಂಧ ರಾಜ್ಯಾದ್ಯಂತ ಭಾರೀ ಆಕ್ರೋಶ ಉಂಟಾಗಿತ್ತು. ಬಸ್ಗಳ (Bus) ಮೇಲಿನ ಜಾಹೀರಾತು ಪೋಸ್ಟರ್ಗಳನ್ನ (Poster) ಕಿತ್ತು ಹಾಕಿ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಹೀಗಾಗಿ ಜಾಹೀರಾತುಗಳನ್ನು ಫೆ.15 ರೊಳಗೆ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಸರ್ಕಾರ ಉಲ್ಟಾ ಹೊಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು, ಕೆಎಸ್ಆರ್ಟಿಸಿ ನೀಡಿದ ಮಾಹಿತಿಯಲ್ಲಿ ‘ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ನಿಗಮದ ಸಾರಿಗೇತರ ಆದಾಯ ಹೆಚ್ಚಿಸಲು ಹಲವಾರು ವರ್ಷಗಳಿಂದ ನಿಗಮದ ಬಸ್ಸುಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೀಡಿರುವ ಟಿಪ್ಪಣಿಯಲ್ಲಿ ಬಸ್ಸುಗಳಲ್ಲಿನ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಸಿದನ್ನು ಅಪರಾಧ ಎಂದಿದೆ. ಅವರ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಾರಿಗೆ ಮತ್ತು ಮುಜರಾಯಿ ಸಚಿವರ ಟಿಪ್ಪಣಿಯಂತೆ, ಬಸ್ಸುಗಳ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ದಿನಾಂಕ 15-02-2026 ರೊಳಗಾಗಿ ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲದೆ ನಿಗಮದ ಬಸ್ಸುಗಳ ಮೇಲೆ Advertisement Standard Council of India Code (ASCI Code) ನಿಯಮಾವಳಿಗಳನ್ವಯ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ನಿಗಮದ ವಾಹನಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತುಗಳು ನಿಗಮಕ್ಕೆ ಸಾರಿಗೇತರ ಆದಾಯದ ಮೂಲವಾಗಿರುತ್ತದೆ. ಆದಾಗ್ಯೂ, ನಿಗಮದ ಬಸ್ಸುಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತಿನ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ/ದೂರುಗಳು ಇದ್ದಲ್ಲಿ, ಲಿಖಿತ ಮನವಿಯನ್ನು ಪಡೆದು, ಈ ಸಂಬಂಧ ಕರಾರಿನ ನಿಯಮಾವಳಿಯಂತೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.
ಆದರೆ ಕೆಲವು ವ್ಯಕ್ತಿಗಳು ಬಸ್ಸುಗಳ ಮೇಲಿರುವ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಅಂತಹ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಫ್ಐಆರ್ ದಾಖಲಿಸಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಿಗಮದ ಎಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೆಶನ ನೀಡಿದ್ದಾರೆ.ಈ ಸಂಬಂಧ ಬಸ್ ನಿಲ್ದಾಣದ ಸಿಬ್ಬಂದಿಗಳು, ಚಾಲಕರು ಹಾಗೂ ಇತರೆ ಸಿಬ್ಬಂದಿಗಳಿಗೂ ಸೂಕ್ತ ತಿಳವಳಿಕೆ ನೀಡಲು ಅವರು ಸೂಚಿಸಿದ್ದಾರೆ.













