Home Entertainment ಸಿನಿಪಯಣದ ಸುವರ್ಣ ಸಂಭ್ರಮ ಆಚರಿಸಿಕೊಂಡವರಿಗೆ ಸನ್ಮಾನ; ಚಿತ್ರೋತ್ಸವದ ಕೊನೆಯ ದಿನ ಕಾಸರವಳ್ಳಿ, ಡಾ. ಜಯಮಾಲ, ರಾಜೇಂದ್ರ...

ಸಿನಿಪಯಣದ ಸುವರ್ಣ ಸಂಭ್ರಮ ಆಚರಿಸಿಕೊಂಡವರಿಗೆ ಸನ್ಮಾನ; ಚಿತ್ರೋತ್ಸವದ ಕೊನೆಯ ದಿನ ಕಾಸರವಳ್ಳಿ, ಡಾ. ಜಯಮಾಲ, ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಆತ್ಮೀಯ ಸನ್ಮಾನ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವೇದಿಕೆ – ಬೆಂಗಳೂರು ಅಂತಾರಾಷ್ಟ್ರೀ ಚಿತ್ರೋತ್ಸವದ ಕೊನೆಯ ದಿನವಾದ ಶುಕ್ರವಾರ, ಕನ್ನಡ ಚಿತ್ರರಂಗದಲ್ಲಿ ೫೦ ವರ್ಷಗಳನ್ನು ಪೂರೈಸಿರುವುದರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ ಗಣ್ಯರನ್ನು ʼಸುವರ್ಣ ಸಂಭ್ರಮʼ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಗಿರೀಶ್‌ ಕಾಸರವಳ್ಳಿ ಮತ್ತು ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಮತ್ತು ನಟಿ, ಮಾಜಿ ಸಚಿವೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಅವರನ್ನು ಆತ್ಮೀಯವಾಗಿ ಗೌರಿಸಲಾಯಿತು. ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌ ಅವರ ಪರಾವಾಗಿ ಅವರ ಮಗಳು ಪೂರ್ಣಿಮಾ ರಾಮ್‌ಕುಮಾರ್‌ ಮತ್ತು ಛಾಯಾಗ್ರಾಹಕ ಎಸ್. ರಾಮಚಂದ್ರ ಅವರ ಪರವಾಗಿ ಅವರ ಸಹೋದರ ಶಂಕರ್‌ ಐತಾಳ್ ಅವರನ್ನು ಗೌರವಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್‌ ಹಾಜರಿದ್ದರು. ಅಕಾಡೆಮಿ ವತಿಯಿಂದ ಡಾ. ಸಾಧು ಕೋಕಿಲ, ಎಲ್ಲಾ ಗಣ್ಯರನ್ನು ಸ್ವಾಗತಿಸಿ ಸನ್ಮಾನಿಸಿದರು.

ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಮಾತನಾಡಿ, ʼಡಾ.ರಾಜಕುಮಾರ್‌ ಮತ್ತು ಪಾರ್ವತಮ್ಮ ರಾಜಕುಮಾರ್‌ ಅವರು ಇಲ್ಲದಿರುವುದರಿಂದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೀಗಾಗಿದೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅವರು ಜೊತೆಗೆ ಇರುತ್ತಿದ್ದರು. ಏನೇ ಸಮಸ್ಯೆ ಬಂದರೂ, ಕೆ.ಜಿ. ರಸ್ತೆಗೆ ಡಾ. ರಾಜಕುಮಾರ್‌ ಬರುತ್ತಿದ್ದರು. ಅವರು ಬಂದರೆ ಜನರನ್ನು ತಡೆಯೋದು ಕಷ್ಟ ಎಂದು ಪೊಲೀಸ್‌ ಕಮಿಷನರ್‌ ಒಮ್ಮೆ ಹೇಳಿದ್ದರು. ಅವರು ಬಂದರೆ ಇಡೀ ರಾಜ್ಯ ನಡಗುತ್ತಿತ್ತು. ಕನ್ನಡ ಚಿತ್ರಗಳಿಗೆ ಶೇ.೧೦೦ ತೆರಿಗೆ ವಿನಾಯ್ತಿಯನ್ನು ಘೋಷಿಸಿ, ಸಚಿವರೇ ಆದೇಶ ಪ್ರತಿಯನ್ನು ಕೆ.ಜಿ. ರಸ್ತೆಗೆ ತಂದಿದ್ದರು. ಒಬ್ಬ ನಾಯಕನಿಲ್ಲದೆ ಇವತ್ತು ಯಾವ ಸ್ಥಿತಿಗೆ ಬಂದಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆʼ ಎಂದರು.

ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ʼಪಾರ್ವತಮ್ಮನವರು ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುತ್ತಿದ್ದರು. ಆದರೆ, ಈಗ ಯಾವ ಹೀರೋ ಹತ್ತಿರ ಕಾದಂಬರಿಯನ್ನು ತೆಗೆದುಕೊಂಡು ಹೋದರೆ, ಮನಗೆ ಸೇರಿಸುವುದಿಲ್ಲ. ನಾವು ನಮ್ಮ ಇತಿಹಾಸ, ಸಂಸ್ಕೃತಿ, ಮಣ್ಣಿನ ವಾಸನೆಯನ್ನು ಮರೆಯುತ್ತಿದ್ದೇವೆ. ಅದೇ ಕಾರಣಕ್ಕೆ ಜನ ಚಿತ್ರಮಂದಿರದತ್ತ ಬರುತ್ತಿಲ್ಲ. ಡಾ. ರಾಜಕುಮಾರ್‌ ಅವರಿದ್ದ ಸಮಯ ಸುವರ್ಣ ಯುಗ. ಅವರಿಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿದೆ. ಪರೀಕ್ಷೆ, ಕ್ರಿಕೆಟ್‌ ಮುಂತಾದ ಬರಗಾಲದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿವೆ. ಮಿಕ್ಕಂತೆ ಸಂಕ್ರಾಂತಿ, ಉಗಾದಿ ಸಂದರ್ಭದಲ್ಲಿ ಚಿತ್ರಮಂದಿರಗಳು ಬೇರೆ ಭಾಷೆಗಳಿಗೆ ಸಿಗುತ್ತಿವೆʼ ಎಂದು ಬೇಸರಿಸಿಕೊಂಡರು.

ಕೆ.ವಿ. ಪ್ರಭಾಕರ್‌ ಅವರ ಸಮ್ಮುಖದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು, ʼಚಲನಚಿತ್ರೋತ್ಸವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡುವಂತಾಗಬೇಕು. ಈ ಮೂಲಕ ಅಲ್ಲಿಯ ಜನರಿಗೂ ಸಿನಿಮಾ ಅಭಿರುಚಿ ಬೆಳೆಯಬೇಕು. ಕನಿಷ್ಠ ವರ್ಷಕ್ಕೆ ಮೂರು ದಿನಗಳಾದರೂ ಬೇರೆ ಊರುಗಳಲ್ಲೂ ಚಿತ್ರೋತ್ಸವ ಮಾಡಬೇಕು. ಇದರ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಂದು ಪ್ರತ್ಯೇಕ ನಿರ್ದೇಶನಾಲಯ ಬೇಕು. ಚಿತ್ರೋತ್ಸವದ ಕೆಲಸಗಳು ವರ್ಷಪೂರ್ತಿ ನಡೆಯುತ್ತಿರಬೇಕುʼ ಎಂದು ಅವರು ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಮಾತನಾಡಿ, ʼಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರು ಸಂಕಷ್ಟದಲ್ಲಿದ್ದಾರೆ. ಪ್ರಮುಖವಾಗಿ ನಿರ್ಮಾಪಕರಿಗೆ ಸಿಗುತ್ತಿರುವ ಸಬ್ಸಿಡಿಯನ್ನು ನಿಲ್ಲಿಸಬಾರದು. ಯಶಸ್ವಿನಿ ಕಾರ್ಡ್ ಅನ್ನು ಚಿತ್ರರಂಗಕ್ಕೆ ವಿಸ್ತರಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ. ಕನ್ನಡಕ್ಕೆ ಒಟಿಟಿ ವೇದಿಕೆಯ ಜೊತೆಗೆ ಚಿತ್ರರಂಗಕ್ಕೆ ಉದ್ಯಮದ ಸ್ಟೇಟಸ್ ಬೇಗ ನೀಡಬೇಕು. ಚಿತ್ರನಗರಿ ಶಂಕುಸ್ಥಾಪನೆ ಮಾಡಿ ಆದಷ್ಟು ಬೇಗ ಅಲ್ಲಿ ಚಿತ್ರೀಕರಣಕ್ಕೆ ಶೀಘ್ರದಲ್ಲೇ ಅವಕಾಶ ನೀಡಬೇಕು. ಅದರ ಪಕ್ಕದಲ್ಲೇ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಉಳಿದುಕೊಳ್ಳಲು ೫೦-೬೦ ಎಕರೆ ಜಾಗ ಕೊಡಬೇಕುʼ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಮ್ಮ ಎಂಟು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಎಸ್. ರಾಮಚಂದ್ರ ಐತಾಳ್‌ ಅವರನ್ನು ನೆನಪಿಸಿಕೊಂಡ ಪದ್ಮಶ್ರೀ ಡಾ. ಗಿರೀಶ್‌ ಕಾಸರವಳ್ಳಿ, ʼರಾಮಚಂದ್ರ ಅವರು ಎಂದೂ ತಮ್ಮ ಅಭಿಪ್ರಾಯವನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ. ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಿದ್ದರು. ಯಾವುದೇ ವಿಷಯವನ್ನಾದರೂ ನೇರಾನೇರ ಹೇಳುವ ಎದೆಗಾರಿಕೆ ಅವರಿಗಿತ್ತು. ಅವರು ಹೇಳಿದ್ದು ಒಪ್ಪಿಗೆಯಾಗುತ್ತದೋ, ಇಲ್ಲವೋ, ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದು ನಿರ್ದೇಶಕರ ಮಾಧ್ಯಮ ಎಂದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ, ನಿರ್ದೇಶಕರ ನಿರ್ಧಾರಕ್ಕೆ ಅವರು ತಲೆ ಬಾಗುತ್ತಿದ್ದರು. ಅದರ ಜೊತೆಗೆ ತಮಗೆ ಕೆಲವು ವಿಷಯಗಳ ಬಗ್ಗೆ ಸಹಮತವಿಲ್ಲ ಎಂದು ನೇರವಾಗಿ ಹೇಳುತ್ತಿದ್ದರುʼ ಎಂದು ನೆನಪಿಸಿಕೊಂಡರು.

ಪೂರ್ಣಿಮಾ ರಾಮ್‌ಕುಮಾರ್‌ ಮಾತನಾಡಿ, ʼನಮ್ಮ ಕುಟುಂಬದ ಈ ಪ್ರಯಾಣದಲ್ಲಿ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಹಿರಿಯರಾದ ಚಿ. ಉದಯಶಂಕರ್‌, ಎಸ್‌.ಎ. ಚಿನ್ನೇಗೌಡ, ಎಸ್‌.ಎ. ಗೋವಿಂದರಾಜ್‌, ದೊರೈ-ಭಗವಾನ್‌ ಮುಂತಾದವರು ಕೈಜೋಡಿಸಿದ್ದರಿಂದ ಅಷ್ಟೊಂದು ಸಿನಿಮಾಗಳು ನಿರ್ಮಿಸುವುದಕ್ಕೆ ಸಾಧ್ಯವಾಯಿತುʼ ಎಂದು ಹೇಳಿದರು.

ವೇದಿಕೆಯಲ್ಲಿ ಸಲ್ಲಿಸಲಾದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಡುವುದಾಗಿ ಹೇಳಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್‌, ಯಾವುದೇ ಕಾರಣಕ್ಕೂ ಸಬ್ಸಿಡಿ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಈ ಸಮಾರಂಭವನ್ನು ಹಿರಿಯ ಪತ್ರಕರ್ತ ಗಂಗಾಧರ್‌ ಮೊದಲಿಯಾರ್‌ ನಡೆಸಿಕೊಟ್ಟರು.