

Parakala Prabhakar: ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಕೇಂದ್ರ ಸಕಾರ ಭಾರತವನ್ನು ಇಸ್ರೇಲೀಕರಣ ಮಾಡಲು ಹುನ್ನಾರ ನಡೆಸುತ್ತಿದೆ. ಇದು ಭಾರತದಲ್ಲಿ ರಕ್ತವನ್ನೇ ಹರಿಸದೇ ನಾಗರಿಕರ ಹತ್ಯೆಗೈಯಲಾಗುತ್ತಿದೆ ಎಂದು ವಿತ್ತಸಚಿವೆ ಪತಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ (Parakala Prabhakar) ಕಳವಳ ವ್ಯಕ್ತಪಡಿಸಿದರು.
ಇಂದಿನ ಭಾರತದಲ್ಲಿ ನಾಗರಿಕರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ಹಾಗೆಯೇ ಹೊಡೆದು ಹಾಕಲು ಕೂಡ ಕಷ್ಟವಿದೆ. ಹಾಗಾಗಿ ಸರಕಾರ ಎಸ್ಐಆರ್ ಮೂಲಕ ರಕ್ತರಹಿತ ನರಮೇಧಕ್ಕಿಳಿದಿದೆ. ಸರ್ಕಾರದ ನಡೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ನಡೆಸಿ ತಡೆಯಬೇಕಿದೆ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ ಕರೆ ನೀಡಿದರು.
ಅಲ್ಲದೆ ನಾವು ಎಷ್ಟು ದಿನ ಇಂತಹ ಚರ್ಚೆ, ಕಾರ್ಯಕ್ರಮ ಮಾಡುತ್ತೇವೆಯೋ ಗೊತ್ತಿಲ್ಲ. ಇನ್ನು ಎಷ್ಟು ವರ್ಷಗಳಲ್ಲಿ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತೇವೋ ಗೊತ್ತಿಲ್ಲ. ಬಹುಶಃ ಈ ವರ್ಷ ಹಾರಿಸಬಹುದು. ಆದರೆ ಮುಂದಿನ ವರ್ಷ ಹಾರಿಸಲಾಗುತ್ತದೆ ಎಂದು ನನಗೆ ಹೇಳಲಾಗುವುದಿಲ್ಲ. ಧ್ವಜ ಹಾರಿಸಲಾಗುವುದು, ಆದರೆ ಅದು ತಿರಂಗಾ ಆಗಿರುತ್ತದೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.













