

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಹೊಸ ಸಿನಿಮಾಗಳ ಪೈಕಿ ಕನ್ನಡದ ‘ಖಾಲಿ ಪುಟ’ ಚಿತ್ರವೂ ಒಂದಾಗಿದ್ದು, ಈ ವಿಭಿನ್ನ ಕಥಾಹಂದರವನ್ನು ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರು ಅನುಭವಿಸದರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಾಗೇಶ್ ಅವರು, ʼಈ ಚಲನಚಿತ್ರವು ಡಿಮೆನ್ಶಿಯಾ (ಮರೆಗುಳಿತನ) ಎಂಬ ಸಮಸ್ಯೆಯ ಸುತ್ತ ಸಾಗುತ್ತದೆ. ಇಂದಿನ ಡಿಜಿಟಲ್ ಪ್ರಪಂಚ ಅಥವಾ ತಂತ್ರಜ್ಞಾನದ ಮೇಲಿನ ನಮ್ಮ ಅತಿಯಾದ ಅವಲಂಬನೆಯು ಮನುಷ್ಯನ ಮೂಲಭೂತ ಭಾವನೆಗಳು ಮತ್ತು ಪರಸ್ಪರರ ನಡುವಿನ ಪ್ರೀತಿಯ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆʼ ಎಂದು ತಿಳಿಸಿದ್ದಾರೆ. ಈ ಸಿನಿಮಾವು ಚಿತ್ರೋತ್ಸವದ ʼಕನ್ನಡ ಚಲನಚಿತ್ರ ಸ್ಪರ್ಧಾ’ ವಿಭಾಗದಡಿ ಪ್ರದರ್ಶನಗೊಳ್ಳುತ್ತಿದೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಗೂ ಚಿತ್ರದ ನಿರ್ಮಾಪಕರೂ ಆದ ಕೃಷ್ಣೇಗೌಡ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ʼನಾನು ಈ ಚಿತ್ರದಲ್ಲಿ ಒಬ್ಬ ಆರ್ಮಿ ಆಫೀಸರ್ ಪಾತ್ರವನ್ನು ನಿರ್ವಹಿಸಿದ್ದೇನೆ. ಕಥೆಯ ಆಳವನ್ನು ಹೆಚ್ಚಿಸಲು ನೈಜ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ದೃಶ್ಯ ವೈಭವದ ಗುಣಮಟ್ಟವನ್ನು ಈ ಸಿನಿಮಾದಲ್ಲಿ ಕಾಪಾಡಿಕೊಳ್ಳಲಾಗಿದೆ. ನಾಲ್ಕನೇ ಬಾರಿ ನನ್ನ ಸಿನಿಮಾ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವುದು ಖುಷಿʼ ಎಂದು ಹೇಳಿದರು.
ಪ್ರಾದೇಶಿಕ ಸೊಗಡಿನೊಂದಿಗೆ ಸಾರ್ವತ್ರಿಕ ವಿಷಯಗಳನ್ನು ಒಳಗೊಂಡಿರುವ ಇಂತಹ ಕಥೆಗಳನ್ನು ಮೆಚ್ಚುವ ಪ್ರೇಕ್ಷಕರ ಮುಂದೆ ಸಿನಿಮಾ ಪ್ರದರ್ಶನವಾಗುತ್ತಿರುವುದು ಚಿತ್ರತಂಡಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಚಿತ್ರದ ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಅವರು ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡರು.













