ಕೇಂದ್ರದ ಪೂರ್ವಾನುಮತಿ ಇಲ್ಲದೆ ಅರಣ್ಯಭೂಮಿ ಗುತ್ತಿಗೆ ನೀಡಲು ಸಾಧ್ಯವಿಲ್ಲ


ಹೊಸದಿಲ್ಲಿ: ಕೇಂದ್ರ ಸರಕಾರದ ಪೂರ್ವಾನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀಡಲಾದ ಯಾವುದೇ ಗುತ್ತಿಗೆ ಕಾನೂನು ಬಾಹಿರವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನ್ಯಾ.ವಿಕ್ರಮ್ ನಾಥ್ ಮತ್ತು ನ್ಯಾ. ಸಂದೀಪ್ ಮೆಹ್ರಾ ಅವರಿದ್ದ ಪೀಠವು, ಅರಣ್ಯ ಭೂಮಿಯ ಮೇಲಿನ ಗುತ್ತಿಗೆಯನ್ನು ಮುಂದುವರಿಸಲು ಸಹಕಾರಿ ಸಂಘಕ್ಕೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಅರಣ್ಯ ಭೂಮಿಯ ಮೇಲೆ ಕೃಷಿ ಉದ್ದೇಶಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನುಬಾಹಿರ ಮತ್ತು 1980ರ ಕಾಯಿದೆಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಹನ್ನೆರಡು ತಿಂಗಳೊಳಗೆ ಸ್ಥಳೀಯ ಮರಗಳು ಮತ್ತು ಸಸ್ಯಗಳನ್ನು ನೆಡುವ ಮೂಲಕ ಭೂಮಿಯನ್ನು ಪುನಃಸ್ಥಾಪಿಸಲು ರಾಜ್ಯ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ 6 ಗುಂಟೆ ಜಮೀನಿಗೆ ಸಂಬಂಧಿಸಿದ ವಿವಾದ ಇದಾಗಿದೆ. ರಾಜ್ಯ ಸರಕಾರವು 1976 ಜೂನ್ 30ರಿಂದ ಕೃಷಿ ಉದ್ದೇಶಗಳಿಗಾಗಿ ಹತ್ತು ವರ್ಷಗಳ ಗುತ್ತಿಗೆಯ ಮೇಲೆ ಸಹಕಾರ ಸಂಘಕ್ಕೆ ಭೂಮಿಯನ್ನು ನೀಡಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯನ್ನು ಸಾಗುವಳಿ ಮಾಡಿದರು. ಗುತ್ತಿಗೆ ಅವಧಿ ಮುಗಿದ ನಂತರ, ರಾಜ್ಯವು ಅದನ್ನು ವಿಸ್ತರಿಸಲು ನಿರಾಕರಿಸಿತು ಮತ್ತು 1985 ಮಾರ್ಚ್ 13ರ ಆದೇಶದ ಮೂಲಕ ಗುತ್ತಿಗೆಯನ್ನು ರದ್ದುಗೊಳಿಸಿತು.

Comments are closed.