ಆರೋಪಿಯ ಪಾಪದ ಹೊರೆಯನ್ನು ಕುಟುಂಬ ಸದಸ್ಯರ ತಲೆ ಮೇಲೆ ಹೊರಿಸುವಂತಿಲ್ಲ – ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಗಾಂಜಾ ಪ್ರಕರಣದಲ್ಲಿ ಆರೋಪಿಯ ಸೋದರ ನೀಡಿದ ಭರವಸೆಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಆರೋಪಿಯ ಪಾಪಗಳ ಹೊರೆಯನ್ನು ಆತನ ಕುಟುಂಬ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಮಾರು 2.91 ಕೋಟಿ ರೂ.ಮೌಲ್ಯದ 730 ಕೆ.ಜಿ.ಗಾಂಜಾವನ್ನು ಹೊಂದಿದ್ದ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿರುವ ಆರೋಪಿಯ ಸೋದರ, ಆರೋಪಿಯ ರಕ್ಷಣೆಗೆ ಬಂದು ಆತ ಪರಾರಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಪ್ರತಿವಾದಿ ಪರ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ ವಿನಂತಿಸಿದ್ದರು. ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ‘ಪ್ರತಿವಾದಿಯು ಪರಾರಿಯಾದರೆ ಆತನ ಸೋದರನನ್ನು ಜೈಲಿಗೆ ಕಳುಹಿಸುವಂತಿಲ್ಲ. ಭಾರತದಲ್ಲಿ ಆರೋಪಿಯ ಪಾಪಗಳನ್ನು ಆತನ ಸೋದರ ಅಥವಾ ಕುಟುಂಬದ ಇತರ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
Comments are closed.