S L Bhairappa: ಯಾವ ಕಾರಣಕ್ಕೂ ಪುತ್ರರು ಬೇಡ, ಮಗಳಂತಿರುವ ಸಹನಾ ನನ್ನ ಅಂತ್ಯಕ್ರಿಯೆ ಮಾಡಲಿ – ಭೈರಪ್ಪ ಬರೆಸಿದ್ದು ಎನ್ನಲಾದ ವಿಲ್ ವೈರಲ್?

Share the Article

S L Bhairappa : ಕನ್ನಡದ ಬರಹ ಮಾಂತ್ರಿಕ, ಕಾದಂಬರಿಗಳ ನೇತಾರ ಎಸ್ ಎಲ್ ಭೈರಪ್ಪನವರು ವಿಧಿವಶರಾಗಿದ್ದಾರೆ. ಬೈರಪ್ಪನವರ ಸಾವಿನ ಬಳಿಕ ಹಲವಾರು ಕುತೂಹಲದ ಸಂಗತಿಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಇದೀಗ ಅವರು ಬರೆಸಿದ ವಿಲ್ ವಿಚಾರ ಒಂದು ಮುನ್ನಡೆಗೆ ಬಂದಿದೆ.

ಹೌದು, ಯಾವುದೇ ಕಾರಣಕ್ಕೂ ನನ್ನ ಇಬ್ಬರು ಮಕ್ಕಳಾದ ಉದಯಶಂಕರ್‌ ಹಾಗೂ ರವಿಶಂಕರ್‌ ಅವರಿಗೆ ನನ್ನ ಅಂತ್ಯಸಂಸ್ಕಾರ ಮಾಡುವ ಅವಕಾಶ ನೀಡಬಾರದು ಎಂದು ಎಸ್‌ಎಲ್‌ ಭೈರಪ್ಪ ಅವರು ಬರೆದಿದ್ದು ಎನ್ನಲಾದ ವಿಲ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರ ಅಭಿಮಾನಿ ಎಂದು ಹೇಳಿಕೊಂಡ ಫಣೀಶ್‌ ಎನ್ನುವವರು ಇದನ್ನು ಪ್ರದರ್ಶನ ಮಾಡಿದ್ದಾರೆ.

ವಿಲ್ ನಲ್ಲಿ ಭೈರಪ್ಪ ಬರೆಸಿದ್ದೇನು?
2022ರ ಮಾರ್ಚ್ 15 ರಂದು ನಾನು ಉಯಿಲು ಮಾಡಿದ್ದೆ. ಅದಾದ ಬಳಿಕ 2025ರ ಜನವರಿ 30 ರಂದು ಉಯಿಲಿನ ಮೂರನೇ ಪುಸ್ತಕದ ದಸ್ತಾವೇಜನ್ನು ತಿದ್ದುಪಡಿ ಮಾಡಲು ಬಯಸಿದ್ದೆ. 2025ರ ಫೆಬ್ರವರಿ 10 ರಂದು ಇದನ್ನು ನೋಂದಾಯಿಸಿಕೊಂಡಿದ್ದೇನೆ. ಆ ನಂತರದ ಅವಧಿಯಲ್ಲಿ ನನ್ನ ಕುಟುಂಬದಲ್ಲಿ ಕೆಲ ವಿದ್ಯಮಾನಗಳ ಹಿನ್ನಲೆಯಲ್ಲಿ ಅದರಲ್ಲೂ ವಿಶೇಷವಾಗಿ ನನ್ನ ಪತ್ನಿ ಬಿಎಸ್‌ ಸರಸ್ವತಿ ಹಾಗೂ ಪುತ್ರರಾದ ಎಸ್‌ಬಿ ರವಿಶಂಕರ್‌ ಹಾಗೂ ಎಸ್‌ಬಿ ಉದಯಶಂಕರ್‌ ಅವರು ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ನನ್ನ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿ ಕುಂಠಿತವಾಗುತ್ತಿರುವುದರಿಂದ ಅವರುಗಳನ್ನು ನನ್ನ ಪೋಷಕರಾಗಿ ನೇಮಿಸಬೇಕೆಂದು ಆರೋಪಿಸಲಾಗಿ ನಾನೂ ಕೂಡ ಈ ಪ್ರಕರಣದಲ್ಲಿ ಸ್ವ ಇಚ್ಛೆಯಿಂದ ಪ್ರತಿವಾದಿಯಾಗಿ ಹಾಜರಾಗಿದ್ದು, ಅವರುಗಳ ಆರೋಪಗಳಿಗೆ ಉತ್ತರ ನೀಡುತ್ತಿದ್ದೇನೆ. ಆದ್ದರಿಂದ 2025ರ ಜನವರಿ 30ರಂದು ಮಾಡಿದ ಉಯಿಲಿನ ತಿದ್ದುಪಡಿ ಪತ್ರದಲ್ಲಿನ ಕೆಲವು ಅಂಶಗಳನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲು ಬಯಸಿ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಬರೆಸುತ್ತಿದ್ದೇನೆ. ಅದರ ಕ್ರಮವೇನೆಂದರೆ:

ನನ್ನ ಮಗ ಉದಯಶಂಕರನಿಗೆ ನೀಡಿರುವ 50 ಲಕ್ಷ ರೂಪಾಯಿಗಳ ಕೊಡುಗೆಯನ್ನು ಈ ಮೂಲಕ ರದ್ದುಮಾಡುತ್ತಿದ್ದೇನೆ. ಇದರಿಂದಾಗಿ ಈ ಕೊಡುಗೆಯನ್ನು ನಗದೀಕರಿಸಿಕೊಳ್ಳಲು ಆತನಿಗೆ ನೀಡಿರುವ ಅಧಿಕಾರವು ರದ್ದಾಗತಕ್ಕದ್ದು. ನನ್ನ ಕಾಲಾನಂತರ ನನ್ನ ಪಾರ್ಥೀವ ಶರೀರಕ್ಕೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಅಂತ್ಯಸಂಸ್ಕಾರಗಳು ನಡೆಯತಕ್ಕದ್ದು. ನನ್ನ ಪಾರ್ಥಿವ ಶರೀರವನ್ನು ನನ್ನ ಹುಟ್ಟೂರಾದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಸಂತಶಿವರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡತಕ್ಕದ್ದು. ಈ ಅಂತ್ಯಸಂಸ್ಕಾರ ಹಾಗೂ ತ್ಸತಂಬಂಧವಾದ ಕೆಲಸಗಳನ್ನು ಹಲವು ವರ್ಷಗಳಿಂದ ನನ್ನ ಯೋಗಕ್ಷೇಮದ ಬಗ್ಗೆ ಮಗಳಾಗಿ ಕಾಳಜಿ ವಹಿಸುತ್ತಾ, ನನ್ನ ಮಾರ್ಗದರ್ಶನದಲ್ಲಿಯೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಉದಯೋನ್ಮುಖ ಲೇಖಕಿ ಬೆಂಗಳೂರಿನ ಸಹನಾ ವಿಜಯ್‌ಕುಮಾರ್‌ ಮಾಡತಕ್ಕದ್ದು.ಈಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಕೂಡ ಹಿರಿಯರ ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾವುದೇ ನಿಷೇಧಗಳಿಲ್ಲವೆಂಬ ಬಗ್ಗೆ ನನಗೆ ಮನದಟ್ಟಾಗಿದೆ. ನನ್ನ ಇಬ್ಬರು ಗಂಡು ಮಕ್ಕಳಾದ ಉದಯಶಂಕರ್ ಹಾಗೂ ರವಿಶಂಕರ್‌ ನನ್ನ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ಮಾಡಬಾರದು.

ಇದನ್ನು ಬರೆಯುವ ಸಂದರ್ಭದಲ್ಲಿ ನನ್ನ ಪಂಚೇದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ನನ್ನ ಯೋಚನಾ ಶಕ್ತಿ ಹಾಗೂ ಬುದ್ಧಿಶಕ್ತಿ ಸಂಪೂರ್ಣವಾಗಿ ನನ್ನ ಹತೋಟಿಯಲ್ಲಿದೆ. ಇದರಿಂದ ಯಾವುದೇ ರೀತಿಯ ಒತ್ತಾಯ ಅಥವಾ ಒತ್ತಡಕ್ಕೆ ಒಳಗಾಗದೆ ನನ್ನ ಆತ್ಮ ಸಂತೋಷದಿಂದ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಮಾಡಿಸುತ್ತಿದ್ದೇನೆ.

ಭೈರಪ್ಪನವರ ಅಂತಿಮ ದರ್ಶನಕ್ಕೆ ಗಣ್ಯರು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಆಗಮಿಸುತ್ತಿದ್ದಂತೆ, ಫಣೀಶ್ ಭೈರಪ್ಪನವರ ವಿಲ್‌ನ ಪ್ರತಿಯನ್ನು ಪ್ರದರ್ಶಿಸಿದರು. ಭೈರಪ್ಪನವರು ವಿಲ್‌ನಲ್ಲಿ ತಮ್ಮ ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ಅವರು ಅಂತ್ಯಸಂಸ್ಕಾರವನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಅವರ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡ ಹೆಣ್ಣುಮಗಳೇ ಅಂತಿಮ ಸಂಸ್ಕಾರವನ್ನು ನೆರವೇರಿಸಬೇಕು ಎಂಬುದು ಅವರ ಆಶಯವಾಗಿತ್ತು. ಆ ಮಹಾನ್ ಚೇತನದ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಫಣೀಶ್ ಪ್ರತಿಪಾದಿಸಿದರು.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಲಾಮಂದಿರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಭಿಮಾನಿಯ ಈ ನಡೆಯಿಂದಾಗಿ, ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರ ನಡುವೆ ಗೊಂದಲ ಉಂಟಾಯಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು, ಕೊನೆಗೆ ಫಣೀಶ್ ಅವರನ್ನ ವಶಕ್ಕೆ ಪಡೆದು ಕರೆದೊಯ್ದರು. ಸಧ್ಯ ವಿಲ್ ಬಾಂಡ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ, ಭೈರಪ್ಪನವರೇ ನಿಜವಾಗಿ ಈ ರೀತಿ ವಿಲ್ ಬರೆದಿದ್ದಾರಾ ಎನ್ನುವುದು ಎಲ್ಲೂ ಅಧಿಕೃತವಾಗಿಲ್ಲ. ಈ ಬಗ್ಗೆ ಅವರ ಕುಟುಂಬಸ್ಥರು ಖಚಿತಪಡಿಸಿಲ್ಲ. ಹೀಗಾಗಿ ಈ ವಿಲ್ ಗೊಂದಲ ಸೃಷ್ಟಿಸಿದ್ದು, ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ

Comments are closed.