BJP Govt: ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಡಿಕೆಶಿ ಮುಂದಾಗಿದ್ದರು – ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಬಾಂಬ್

Share the Article

BJP Govt: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಕಾಂಗ್ರೆಸ್‌ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿದ್ದರು. ಡಿಕೆಶಿಗೆ ಕಾಂಗ್ರೆಸ್ ಶಾಸಕರ ಬೆಂಬಲವಿಲ್ಲ ಎಂದು ಗುಪ್ತಚರ ವರದಿಯಲ್ಲಿ ತಿಳಿದ ಬಳಿಕ ಪ್ರಯತ್ನ ಕೈಬಿಡಲಾಯಿತು ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಒಂದು ಸುತ್ತು ಮಾತುಕತೆ ನಡೆದಿತ್ತು. ಒಪ್ಪಂದದ ಪ್ರಕಾರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ, ಬಿ.ವೈ.ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಮುಖ್ಯಮಂತ್ರಿ ಆಗಲೇಬೇಕೆಂದು ಛಲ ಹೊಂದಿರುವ ಡಿ.ಕೆ.ಶಿವಕುಮಾ‌ರ್, ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಬಿಟ್ಟು ಕೊಡುವುದಿಲ್ಲ ಎಂದು ಮನವರಿಕೆ ಮಾಡಿಕೊಂಡು ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿ ಆಗಲು ಪ್ರಯತ್ನಪಟ್ಟಿದ್ದರು. ಈ ಸಂಬಂಧ ಈಗಾಗಲೇ ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ ಎಂದರು.

ಸುಮಾರು 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದು “ನಮಸ್ತೇ ಸದಾ ವತ್ಸಲೇ” ಎಂದು ಹೇಳುವ ಯೋಜನೆಯನ್ನೂ ಡಿ.ಕೆ.ಶಿವಕುಮಾರ್ ಹಾಕಿಕೊಂಡಿದ್ದರು. ಆದರೆ, 12 ರಿಂದ 13 ಮಂದಿ ಕಾಂಗ್ರೆಸ್ ಶಾಸಕರ ಬೆಂಬಲವೂ ಅವರಿಗಿಲ್ಲ. ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆ ಇದ್ದಾರೆ ಎಂಬುದು ಕೇಂದ್ರ ಇಂಟಲಿಜೆನ್ಸ್ ಮಾಹಿತಿಯಿಂದ ತಿಳಿದು ಬಂದಿತ್ತು. ಈ ಬಗ್ಗೆ ನಮ್ಮ ಹೈಕಮಾಂಡ್ ನಾಯಕರೇ ಒಬ್ಬರು ‘ಡಿ.ಕೆ.ಶಿವ ಕುಮಾರ್ ಬಳಿ ಎಷ್ಟು ಕಾಂಗ್ರೆಸ್ ಶಾಸಕರಿದ್ದಾರೆ’ ಎಂದು ಕೇಳಿದ್ದರು. ಒಂದು ಹತ್ತು ಮಂದಿ ಇರಬಹುದು. ಬಿಜೆಪಿಗೆ ಬರುತ್ತಾರೆಂದು ಗೊತ್ತಾದರೆ ಅವರು ಕೂಡ ಇರಲಿಕ್ಕಿಲ್ಲ ಎಂದು ಹೇಳಿದ್ದೆ ಎಂದು ಯತ್ನಾಳ್ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಬೆಂಗಳೂರಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನನಗೆ ಆ ಕಸ ಅಥವಾ ಸೆಗಣಿ ಮೇಲೆ ಕಲ್ಲು ಹಾಕಲು ಇಷ್ಟವಿಲ್ಲ ಎಂದರು.

ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಾರೆ. ಆದರೂ ಒಂದೆರಡು ವರ್ಷ ಅವರೇ ಸರ್ಕಾರ ಮುನ್ನಡೆಸಲಿ. ಡಿ.ಕೆ.ಶಿವಕುಮಾರ್ ಮತ್ತು ಬಿ.ವೈ.ವಿಜಯೇಂದ್ರ ಭ್ರಷ್ಟರು. ಇವರಿಬ್ಬರೂ ಸೇರಿದರೆ ಕರ್ನಾಟಕವನ್ನೇ ಮಾರಾಟ ಮಾಡಿಬಿಟ್ಟಾರು ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

Mysore Dasara: ಮೈಸೂರು ದಸರಾ ಏರ್‌ ಶೋ – ಈ ದಿನದಂದು ನಡೆಯಲಿದೆ ಲೋಹದ ಹಕ್ಕಿಗಳ ಕಲರವ

Comments are closed.