ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು: ಸಂಸದೆ ಬಾಯಿಂದ ಇಂಥಾ ಮಾತಾ?

Kolkata: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಬಾಂಗ್ಲಾ ಗಡಿಯಲ್ಲಿ ಒಳನುಸುಳುವಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಮಹುವಾ ಮೊಯಿತ್ರಾ, ಅಮಿತ್ ಶಾ ತಲೆಯನ್ನು ಕತ್ತರಿಸಿ, ಪ್ರದರ್ಶನಕ್ಕಾಗಿ ಟೇಬಲ್ ಮೇಲಿಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಭಾರತದ ಗಡಿಯ ರಕ್ಷಣೆ ಮಾಡಲು ಸಾಧ್ಯವಾಗದಿದ್ರೆ, ನೂರಾರು ಸಂಖ್ಯೆಯಲ್ಲಿ ನುಸುಳುಕೋರರು ಒಳನುಸುಳುತ್ತಿದ್ದರೆ, ನಮ್ಮ ಮಹಿಳೆಯರನ್ನ ಅಗೌರವಿಸುತ್ತಿದ್ದರೆ ಅಥವಾ ನಮ್ಮ ಭೂಮಿಯನ್ನ ಅತಿಕ್ರಮಿಸಿಕೊಳ್ಳುತ್ತಿದ್ದರೆ? ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲೆ ಪ್ರದರ್ಶನಕ್ಕಿಡುವುದು ನಿಮ್ಮ ಕರ್ತವ್ಯ. ಏಕೆಂದರೆ ಗಡಿ ಕಾಯಲು, ನುಸುಳುವಿಕೆ ತಡೆಯಲು ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಸ್ವಾತಂತ್ರ್ಯ ಉತ್ಸವದ ದಿನ ಪ್ರಧಾನಿ ಕೆಂಪುಕೋಟೆ ಭಾಷಣ ಉಲ್ಲೇಖಿಸಿದ ಮಹುವಾ, ʻಮೋದಿ ಕೆಂಪು ಕೋಟೆಯಲ್ಲಿ ನಿಂತು ನುಸುಳುಕೋರು ಜನಸಂಖ್ಯಾ ಬದಲಾವಣೆ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸದೇ ಗೃಹಸಚಿವರು ಮುಂದಿನ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಗಡಿಯಲ್ಲಿ ಭದ್ರತಾ ಪಡೆಗಳಿದ್ದೂ ಒಳನುಸುಳುವಿಕೆ ಏಕೆ ಮುಂದುವರಿಯುತ್ತಿದೆ? ಇದನ್ನ ತಡೆಯುವಲ್ಲಿ ಶಾ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೊಯಿತ್ರಾ ಹೇಳಿಕೆಯಿಂದ ಕೇಸರಿ ಪಡೆ ಕೆರಳಿ ಕೆಂಡವಾಗಿದ್ದು, ಆಕೆ ಲಜ್ಜೆಗೆಟ್ಟ ಹೇಳಿಕೆ ನೀಡಿದ್ದಾರೆ. ಇದು ರಾಜಕೀಯ ಮೀರಿದ ಅಪ್ಪಟ ದ್ವೇಷ ಭಾಷಣ, ಇದರಲ್ಲಿ ವಿಷ ತುಂಬಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
Comments are closed.