Mysore Dasara: ಜಂಬೂ ಸವಾರಿ ಮೆರವಣಿ – ಶಿಥಿಲಗೊಂಡ ಕಟ್ಟಡಗಳ ಮೇಲೇರಲು ನಿರ್ಬಂಧ – ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಧಾರ

Mysore Dasara: ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯ ವೀಕ್ಷಣೆಗೆ ಇನ್ನೂ ಮುಂದೆ ಲ್ಯಾನ್ಸ್ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡ ಏರುವಂತಿಲ್ಲ!

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಸಾಗುವ ಮಾರ್ಗದಲ್ಲಿರುವ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಕೆ.ಆರ್.ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಕಟ್ಟಡ, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಸಯ್ಯಾಜಿರಾವ್ ರಸ್ತೆಯಲ್ಲಿರುವ ಇತರೆ ಶಿಥಿಲಗೊಂಡಿರುವ ಕಟ್ಟಡಗಳ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಜಂಬೂಸವಾರಿ ವೀಕ್ಷಣೆಗೆ ರಾಜಮಾರ್ಗದುದ್ದಕ್ಕೂ ಸೇರುವ ಲಕ್ಷಾಂತರ ಭಕ್ತಾಧಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಶಿಥಿಲಗೊಂಡಿರುವ ಕಟ್ಟಡಗಳನ್ನೇರುವುದಕ್ಕೆ ಕಡಿವಾಣ ಹಾಕಿದೆ. ಪ್ರತೀ ವರ್ಷವೂ ಶಿಥಿಲಗೊಂಡಿರುವ ಪಾರಂ ಪರಿಕ ಕಟ್ಟಡಗಳ ಮೇಲೆ ಹತ್ತಬೇಡಿ ಎಂದು ಎಚ್ಚರಿಕೆ ನೀಡುತ್ತಿದ್ದರೂ ಸಾವಿರಾರು ಮಂದಿ ಕಟ್ಟಡಗಳ ಮೇಲೆ ಹತ್ತಿ ವೀಕ್ಷಣೆ ಮಾಡುತ್ತಿದ್ದರು. ಆದರೆ, ಈ ವರ್ಷದಿಂದ ಮುಂಜಾಗ್ರತೆ ದೃಷ್ಟಿಯಿಂದ ಯಾರೊಬ್ಬರನ್ನು ಶಿಥಿಲಗೊಂಡಿರುವ ಕಟ್ಟಡಗಳ ಮೇಲೆ ಹತ್ತದಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ.
ಸುರಕ್ಷಿತ ಮತ್ತು ಯಾವುದೇ ಅಹಿತಕರ ಘಟನೆಗಳಿಲ್ಲದ ವಿಜಯದಶಮಿ ಮೆರವಣಿಗೆ ನಡೆಸುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ. ಜನರು ಮೆರವಣಿಗೆ ವೀಕ್ಷಿಸಲು ಶಿಥಿಲಗೊಂಡಿರುವ ಕಟ್ಟಡಗಳ ಛಾವಣಿಯ ಮೇಲೆ ಹತ್ತುವುದನ್ನು ತಡೆಯಲು ಮುಂಚಿತವಾಗಿಯೇ ಕ್ರಮ ಕೈಗೊಳ್ಳಲಿದ್ದು, ಪೊಲೀಸರ ನಿಯೋಜನೆಯೊಂದಿಗೆ ದಿನವಿಡೀ ಕಟ್ಟಡಗಳನ್ನು ಬಂದ್ ಮಾಡಲಾಗುವುದು.
ಕಟ್ಟಡಗಳ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ, ಯಾರೋಬ್ಬರು ಕಟ್ಟಡಗಳ ಮೇಲೆ ಹೋಗದಂತೆ ತಡೆಯಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾ ಗಿದೆ ಎಂದು ಹೇಳಿದರು. ಮರಗಳನ್ನು ಹತ್ತುವ ಜನರು ಮತ್ತು ಗೋಪುರಗಳಂತಹ ಎತ್ತರದ ಸ್ಥಳಗಳ ಯಾರೂ ಹತ್ತದಂತೆ ಗಮನಿಸಲು ಪೊಲೀಸರಿಗೆ ಸೂಚಿಸಲಾಗಿದೆ. ರಸ್ತೆ ಬದಿಯಲ್ಲಿ ಕುಳಿತು ವೀಕ್ಷಣೆ ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಲಕ್ಷಾಂತರ ಜನರ ಸುರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Comments are closed.