Chamundi Hills: ಕುಡುಕರ ತಾಣವಾಗುತ್ತಿದೆಯಾ ಚಾಮುಂಡಿಬೆಟ್ಟ! ಎರಡು ಟ್ರ್ಯಾಕ್ಟರ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ, 7 ಚೀಲಗಳಷ್ಟು ಮದ್ಯದ ಬಾಟಲಿ ಸಂಗ್ರಹ

Share the Article

Chamundi Hills: ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನ ಆವರಣದಲ್ಲಿ ಮದ್ಯಪಾನಿಗಳ ಹಾವಳಿ ಜೊತೆಗೆ ಆನೈರ್ಮಲ್ಯದ ವಾತಾವರಣ ಕಂಡುಬಂದಿತ್ತು. ಇದೀಗ ಚಾಮುಂಡಿ ಬೆಟ್ಟದಲ್ಲೂ ಕುಡುಕರ ತಾಣಗಳು ಕಂಡುಬಂದಿವೆ. ಯುವ ಬ್ರಿಗೇಡ್ ಮೈಸೂರು ಘಟಕದ ಇತ್ತೀಚೆಗೆ ಚಾಮುಂಡಿ ಬೆಟ್ಟದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ನಡೆಸಿತು. ನೂರಾರು ಸ್ವಯಂ ಸೇವಕರು ಬೆಟ್ಟದಪಾದದಲ್ಲಿ ಸಮಾವೇಶಗೊಂಡು 1008 ಮೆಟ್ಟಿಲುಗಳಲ್ಲಿ ಹರಡಿದ್ದ ಪ್ಯಾಕ್ ಬಾಟಲಿ, ಹೊದಿಕೆ ಸೇರಿದಂತೆ ಇನ್ನಿತರ ತ್ಯಾಜ್ಯ ಸಂಗ್ರಹ ಮಾಡಿದರು.

ಸತತ ಆರು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ದಲ್ಲಿ ತೊಡಗಿದ ಸ್ವಯಂ ಸೇವಕರು, ಮಧ್ಯಾಹ್ನದ ವೇಳೆಗೆ ಬೆಟ್ಟದ ತುದಿಯನ್ನು ತಲುಪಿದರು. ಆಘಾತ ಕಾರಿ ಸಂಗತಿಯೆಂದರೆ, ಪೊದೆಗಳ ನಡುವೆ ರಸ್ತೆಬದಿಯಲ್ಲಿ, ವ್ಯೂ ಪಾಯಿಂಟ್ಸ್ ಬಳಿ ಹಾಗೂ ಪೊಲೀಸರು ಗಸ್ತು ತಿರುಗುವ ಸ್ಥಳಗಳಲ್ಲಿಯೂ ನೂರಾರು ಮದ್ಯದ ಬಾಟಲಿಗಳು ಕಂಡು ಬಂದವು. ಒಟ್ಟಾರೆಯಾಗಿ ಏಳು ಗೋಣಿ ಚೀಲಗಳಷ್ಟು ಮದ್ಯದ ಖಾಲಿ ಬಾಟಲಿಗಳನ್ನು ಸಂಗ್ರಹಿಸಲಾಯಿತು. ಅಲ್ಲದೆ, ಎರಡು ಟ್ರಾಕ್ಟರನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಇದೇ ವೇಳೆ ಸ್ವಯಂ ಸೇವಕರು ಸ್ವಚ್ಛತೆ ಬಗ್ಗೆ ಜಾಗೃತಿ ಸಹ ಮೂಡಿಸಿದರು. ಭಕ್ತರು ಹಾಗೂ ಚಾರಣಿಗರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು. ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಈ ಸ್ವಚ್ಛತಾ ಶ್ರಮದಾನಕ್ಕೆ ಅಗತ್ಯ ಸಹಕಾರ ನೀಡಲಾಯಿತು. ಕಸದ ವಿಲೇವಾರಿಗೆ ಪಂಚಾಯಿತಯಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಯುವ ಬ್ರಿಗೇಡ್ ರಾಜ್ಯ ಸಂಯೋಜಕ ಚಂದ್ರಶೇಖರ್, ಭಾರೀ ಪ್ರಮಾಣದ ತ್ಯಾಜ್ಯ ಕಂಡು ಕಳವಳ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯ ಇರುವುದು ಸಾಮಾನ್ಯ ಸಂಗತಿ. ಆದರೆ ಇಂತಹ ಪವಿತ್ರ ಸ್ಥಳದಲ್ಲಿ ನೂರಾರು ಮದ್ಯದ ಬಾಟಕಗಳು ಕಂಡು ಬಂದಿದ್ದು ಮಾತ್ರ ಅತ್ಯಂತ ಬೇಸರದ ಸಂಗತಿ. ಮದ್ಯ ಸೇವಿಸಬೇಂದ್ರರೆ, ಅದಕ್ಕಾಗಿಯೇ ಇರುವ ಸ್ಥಳಗಳಿಗೆ ಹೋಗಲಿ. ಅದನ್ನು ಬಿಟ್ಟು ಇಂತಹ ಪವಿತ್ರ ಸ್ಥಳಗಳಿಗೆ ಬರುವುದನ್ನು ಸಹಿಸಲು ಸಾಧ್ಯವಿಲ್ಲ. ಇಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯುವ ಬ್ರಿಗೇಡ್ ಮೈಸೂರು ವಿಭಾಗದ ಸಂಯೋಜಕ ಪ್ರಮೋದ್, ಜಿಲ್ಲಾ ಸಂಯೋಜಕ ನಿತಿನ್, ಸ್ವಯಂ ಸೇವಕರಾದ ಸಾಗರ್, ರಾಮನುಜ, ಪ್ರಶಾಂತ್, ಅಶ್ವಥ್, ಯೋಗೇಶ್, ಸೂರಿ, ಸ್ಕಂದ, ಪರೀಕ್ಷಿತ್, ಶಶಾಂಕ್, ಓಂ. ರಮೇಶ್, ನಾರಾಯಣ್, ಮಂಜುನಾಥ್, ನರಸಿಂಹ ಮೂರ್ತಿ, ಸುಹಾಸ್, ಸುಶ್ಮಿತಾ, ಸುರಭ, ರಚನಾ ಶಿವಕುಮಾರ್, ದರ್ಶಿನಿ, ಶಿಲ್ಪಾ ರವಿ ಸೇರಿದಂತೆ ಮತ್ತಿತರರು ಸಕ್ರಿಯವಾಗಿ ಭಾಗವಹಿಸಿದ್ದರು.

Comments are closed.