Puttur: ಪುತ್ತೂರು: ತಂದೆಯನ್ನು ನೋಡಲೆಂದು ಬಂದ ಮಗಳಿಗೆ ಶಾಕ್: ಕೊಳೆತ ಸ್ಥಿತಿಯಲ್ಲಿದ್ದ ತಂದೆಯ ಶವ

Puttur: ತಂದೆಯ ಯೋಗಕ್ಷೇಮ ವಿಚಾರಿಸಲೆಂದು ಬಂದ ಮಗಳಿಗೆ ತನ್ನ ತಂದೆ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ. ಈ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಜೂನ್ 1) ಬೆಳಕಿಗೆ ಬಂದಿದೆ.

ಕೆದಂಬಾಡಿ ಗ್ರಾಮದ ಮುಂಡಾಳ ನಿವಾಸಿ ಕೃಷ್ಣಪ್ಪ ಗೌಡ (58) ಮೃತ ವ್ಯಕ್ತಿ.
ಸುಪ್ರಿಯಾ (33) ಮೃತರ ಮಗಳು ಈ ಕುರಿತು ಠಾಣೆಗೆ ದೂರನ್ನು ನೀಡಿದ್ದು, ಅದರಲ್ಲಿ ನನ್ನ ತಂದೆ ಕೃಷ್ಣಪ್ಪ ಗೌಡ ಅವರು ಮನೆಯಲ್ಲಿ ಒಬ್ಬರೇ ವಾಸ ಮಾಡುತಿದ್ದು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕುಡಿತದ ಚಟವನ್ನು ಅವರಿಗಿತ್ತು. ಸುಪ್ರಿಯ ಮತ್ತು ಅವರ ಅಕ್ಕ ತಂದೆಯನ್ನು ನೋಡಲೆಂದು ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು.
ಸುಪ್ರಿಯ ಎಪ್ರಿಲ್ 20 ರಂದು ತವರು ಮನೆಗೆ ಬಂದಿದ್ದು, ಮೇ 29 ರಂದು ಸವಣೂರಿನಲ್ಲಿದ್ದ ತಮ್ಮ ಚಿಕ್ಕಮ್ಮನ ಮನೆಗೆ ತೆರಳಿದ್ದು. ಜೂನ್ 1 ರಂದು ಬೆಳಿಗ್ಗೆ ಸುಮಾರು 10.30 ರ ಹೊತ್ತಿಗೆ ಚಿಕ್ಕಮ್ಮನ ಮನೆಯಿಂದ ವಾಪಸ್ ತಂದೆಯ ಮನೆಗೆ ಬಂದಾಗ, ಮನೆಯ ಹೊರಗಿನ ಬಲ್ಬ್ ಉರಿಯುತ್ತಿದ್ದು, ಮನೆಯ ಮುಂಭಾಗದ ಹಾಗೂ ಹಿಂಭಾಗದ ಬಾಗಿಲು ಲಾಕ್ ಆಗಿತ್ತು.
ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದ್ದು, ಸಂಶಯದಿಂದ ಕಿಟಕಿ ಮೂಲಕ ನೋಡಿದಾಗ ತಂದೆ ಕೃಷ್ಣಪ್ಪ ಗೌಡ ತಮ್ಮ ಕೋಣೆಯ ಬೆಂಚಿನ ಮೇಲೆ ಮಲಗಿದ್ದು, ದೇಹದ ಮೇಲಿನಿಂದ ನೊಣಗಳು ಹಾರಾಡುವುದು ಕಂಡು ಬಂದಿದೆ. ಕೂಡಲೇ ಸುಪ್ರಿಯ ಚಿಕ್ಕಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಚಿಕ್ಕಪ್ಪ ಸ್ಥಳಕ್ಕೆ ಬಂದಿದ್ದು, ಮನೆಯ ಮಾಡಿನ ಹಂಚುಗಳನ್ನು ತೆಗೆದು ಒಳ ಪ್ರವೇಶಿಸಿ ನೋಡಿದಾಗ, ಕೃಷ್ಣಪ್ಪ ಗೌಡ ಮೃತ ಹೊಂದಿರುವುದು ಕಂಡು ಬಂದಿದೆ. ಕೆಲವು ದಿನಗಳ ಹಿಂದೆಯೇ ಅವರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.
Comments are closed.