Mangalore: ಮಂಗಳೂರು: ಸಿಬ್ಬಂದಿಗಳ ಮಧ್ಯೆ ಮಾರಾಮಾರಿ! ಅನಾಗರಿಕ ವರ್ತನೆಯಲ್ಲಿ ಮತ್ತೊಮ್ಮೆ ಸುದ್ದಿಯಾದ ಖಾಸಗಿ ಬಸ್!

Mangalore: ಮಂಗಳೂರು: ಪ್ರಯಾಣಿಕರ ಎದುರಲ್ಲೇ ಖಾಸಗಿ ಬಸ್ಸಿನ ಸಿಬ್ಬಂದಿಗಳು ಪರಸ್ಪರ ಹೊಡೆದಾಟ ನಡೆಸಿ ಭೀತಿ ಸೃಷ್ಟಿಸಿದ ಘಟನೆಯು ಮಂಗಳೂರು-ಉಪ್ಪಿನಂಗಡಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.

ವಿಟ್ಲದಿಂದ ಮಂಗಳೂರಿಗೆ ತೆರಳುತ್ತಿದ್ದ ಸೆಲಿನಾ ಎಂಬ ಹೆಸರಿನ ಖಾಸಗಿ ಬಸ್ ಹಾಗೂ ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಧರಿತ್ರಿ ಎಂಬ ಹೆಸರಿನ ಖಾಸಗಿ ಬಸ್ಸಿನ ಸಿಬ್ಬಂದಿಗಳ ಮಧ್ಯೆ ನಡೆದ ಜಗಳ ಎರಡೂ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಭಯ ಸೃಷ್ಟಿಸಿದೆ.

ಚಾಲಕ ಉಗುಳಿದ ಎಂಬ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಎರಡೂ ಬಸ್ಸಿನ ಸಿಬ್ಬಂದಿಗಳು ಪರಸ್ಪರ ಹೊಡೆದಾಟ ನಡೆಸಿದ್ದು, ಬಸ್ಸಿನ ಒಳಗಡೆ ಪ್ರಯಾಣಿಕರು ಇದ್ದಾರೆ ಎಂಬುವುದನ್ನೂ ಮರೆತು ದರ್ಪ ಮೆರೆದಿದ್ದು, ಅಲ್ಲದೇ ಓರ್ವ ಸಿಬ್ಬಂದಿಯನ್ನು ಇನ್ನೊಂದು ಬಸ್ಸಿನ ಇಬ್ಬರು ಸಿಬ್ಬಂದಿಗಳು ಮನಸೋ ಇಚ್ಛೆ ಥಳಿಸುವ ದೃಶ್ಯ ಬಸ್ಸಿನ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ಸಿನ ಅತೀವೇಗ, ಅಜಾಗರೂಕತೆಯ ಚಾಲನೆಯಿಂದಾಗಿ ಜೀವ ಕೈಯಲ್ಲಿ ಹಿಡಿದು ಪ್ರಯಾಣ ನಡೆಸುತ್ತಿರುವ ಪ್ರಯಾಣಿಕರಿಗೆ ಇನ್ನು ಈ ಭಯವೂ ಕಾಡಿದ್ದು, ಮುಂದೆ ಸ್ಥಳೀಯವಾಗಿ ಓಡಾಟ ನಡೆಸುವ ಖಾಸಗಿ ಬಸ್ಸುಗಳನ್ನು ಏರಲು ಭಯಪಡುವಂತಾಗಿದೆ.

ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಹಾಗೂ ಇಂತಹ ದುರ್ವರ್ತನೆ ತೋರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕ ವಯಲದಲ್ಲಿ ವ್ಯಾಪಕವಾಗಿ ವ್ಯಕ್ತವಾಗಿದೆ.

Leave A Reply

Your email address will not be published.