Radhika Kumaraswamy: ಕನ್ನಡ ಚಿತ್ರರಂಗದಲ್ಲಿ ತನಗಾದ ಕರಾಳ ಘಟನೆ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ!

Radhika Kumaraswamy: ಕನ್ನಡ ಚಿತ್ರರಂಗದಲ್ಲಿ ತನಗಾದ ಕರಾಳ ಘಟನೆಯನ್ನು ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮಾಧ್ಯಮ ಮೂಲಕ ಹೇಳಿಕೊಂಡಿದ್ದಾರೆ. ಹೌದು, ಸಿನಿಮಾ ಶೂಟಿಂಗ್ ಸಮಯದಲ್ಲಿ ತಮಗೆ ಅಗೌರವ ಸಂಭವಿಸಿದ ಘಟನೆಯನ್ನು ಅವರು ವಿವರಿಸಿದ್ದಾರೆ.

ಈಗಾಗಲೇ ಕೇರಳ ಚಿತ್ರರಂಗದಲ್ಲಿ ಸಿನಿಮಾ ನಟಿಯರು, ಕಲಾವಿದೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಮಾ ಕಮಿಟಿ ವರದಿ ಬಿಚ್ಚಿಟ್ಟಿದೆ. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿಯೂ ಕಾಸ್ಟಿಂಗ್ ಕೌಚ್ ನಡೆಯುತ್ತಿದ್ದು, ಇದರ ತನಿಖೆಗೆ ಸಮಿತಿ ರಚಿಸುವಂತೆ 153ಕ್ಕೂ ಅಧಿಕ ನಟ, ನಟಿಯರು ಸಹಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆ ಮಾಡಿದಾಗ, ಇದಕ್ಕೆ ಉತ್ತರಿಸಿದ ಅವರು, ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ ಅನುಭವವಾಗಿಲ್ಲ. ಆದರೆ, ನಾನು ಸಿನಿಮಾ ಕ್ಷೇತ್ರಕ್ಕೆ ಆರಂಭದಲ್ಲಿ ಕಾಲಿಟ್ಟಾಗ ನನಗೂ ಒಂದು ಕೆಟ್ಟ ಅನುಭವ ಆಗಿತ್ತು. ನಾನು ಹೊಸದಾಗಿ ಸಿನಿಮಾಕ್ಕೆ ಬಂದಿದ್ದಾಗ, ನನಗೆ ಯಾವುದೇ ಅನುಭವ ಇರಲಿಲ್ಲ ನನ್ನ ಪ್ಯಾಂಟಿನೊಳಗಿನ ತೆಳುವಾದ ಬಟ್ಟೆ (ಸ್ಟಾಕಿಂಗ್ಸ್) ಹರಿದು ಹೋಗಿದೆ, ಬೇರೆಯದ್ದು ಕೊಡಿ ಎಂದು ಕೇಳಿದೆ. ಆದರೆ, ನಿರ್ದೇಶಕರು ನಿನ್ನ ಮುಖಕ್ಕೆ ಅದು ಬೇರೆ ಬೇಕಾ ಎಂದು ತುಂಬಾ ಕೀಳಾಗಿ ನಡೆಸಿಕೊಂಡಿದ್ದಾರೆ. ಅವತ್ತು ನನಗೆ ತುಂಬಾ ಬೇಸರ ಮತ್ತು ಎಲ್ಲರ ಮುಂದೆ ಅವಮಾನ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ವಾಸ್ತವದಲ್ಲಿ ಯಾವುದೇ ಕಲಾವಿದೆ, ನಟಿ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು, ಸಿನಿಮಾದಲ್ಲಿ ಯಶಸ್ಸು ಗಳಿಸಿ, ಹೆಸರು ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬಂದಿರುತ್ತಾರೆ. ಹೀಗೆ ಬಂದ ಹೊಸಬರಿಗೆ ಅನೇಕ ರೀತಿಯಲ್ಲಿ ಕೆಟ್ಟ ಅನುಭವ ಆಗುತ್ತದೆ. ಯಾವತ್ತು ಆ ರೀತಿ ತಪ್ಪು ಆಗಬಾರದು. ಆ ರೀತಿ ಯಾರು ಮಾಡುತ್ತಾರೆಯೋ ಅಂಥವರಿಗೆ ಶಿಕ್ಷೆಯನ್ನು ಕೊಡಿಸಲು ಹೋರಾಡಬೇಕು ಎಂದಿದ್ದಾರೆ. ಎಲ್ಲೆಲ್ಲಿ ತಪ್ಪು ನಡೆಯುತ್ತದೆ ಅದನ್ನು ಅಲ್ಲಿಯೇ ನಿಲ್ಲಿಸಿಬಿಡಬೇಕು. ಕನ್ನಡ ಚಿತ್ರರಂಗದಲ್ಲಿ ಯಾವುದೇ ಮಹಿಳೆಯರಿಗೆ ತೊಂದರೆ ಆಗಬಾರದು, ಇನ್ನು ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯವರು ಕೂಡಾ ಇದ್ದಾರೆ, ಹಾಗಂತ ಎಲ್ಲರನ್ನು ತಪ್ಪು ಎಂದು ಹೇಳುವುದು ಸರಿಯಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

Leave A Reply

Your email address will not be published.