Kharge Land scam: ವಿಹಾರ ಶಿಕ್ಷಣ ಟ್ರಸ್ಟ್ ಇದು ಪಬ್ಲಿಕ್ ಟ್ರಸ್ಟ್ ಅಲ್ಲ: ಒಂದು ಕುಟುಂಬದ ಟ್ರಸ್ಟ್: ಜಮೀನು ವಾಪಸ್ ಪಡೆಯಿರಿ – ಛಲವಾದಿ ನಾರಾಯಣಸ್ವಾಮಿ

Kharge Land scam: ಪ್ರಿಯಾಂಕ್ ಖರ್ಗೆ(Priyanka Gharge) ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್(Land) ಪಡೆಯಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayana) ಅವರು ಒತ್ತಾಯಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ಗೆ(Vihara Educational Trust) ಕೆಐಎಡಿಬಿಯಿಂದ(KIADB) ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಕೈಗಾರಿಕಾ ನಿವೇಶನ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಿಎ ಸೈಟ್ ಪಡೆಯಲು ಕೆಲವು ಕಾನೂನುಗಳಿವೆ. ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆ- ಹೀಗೆ ನಿಗದಿತ ಉದ್ದೇಶಕ್ಕೆ ನಮೂದಾಗಿರುತ್ತದೆ. ಇದನ್ನು ಇತರ ಅರ್ಜಿಗಳನ್ನು ತಿರಸ್ಕರಿಸಿ ಪ್ರಬಲರಿಗೆ ಕೊಡಲಾಗಿದೆ. ಇದರಿಂದ ಅನುಮಾನಕ್ಕೆ ಎಡೆಯಾಗಿದೆ ಎಂದು ವಿವರಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ವಿಪಕ್ಷ ನಾಯಕ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ಅವರ ಖಾಸಗಿ, ಒಂದೇ ಮನೆಗೆ ಸೀಮಿತ ಟ್ರಸ್ಟಿಗೆ ನಿವೇಶನ ಕೊಡಲಾಗಿದೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರ್ಗಿಯಲ್ಲಿ ನೋಂದಣಿ ಮಾಡಿದ್ದಾರೆ. ಇದೊಂದು ಧಾರ್ಮಿಕ ಉದ್ದೇಶದ ಟ್ರಸ್ಟ್. ಏರೋಸ್ಪೇಸ್ ಸಂಬಂಧಿಸಿ ನಿವೇಶನ ಪಡೆದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಒಂದೈವತ್ತು ಕುಟುಂಬಗಳಷ್ಟೇ ದಲಿತರಲ್ಲ; ಛಲವಾದಿ ನಾರಾಯಣಸ್ವಾಮಿ ದಲಿತ ಎಂದಾಕ್ಷಣ ನಾನೊಬ್ಬನೇ ಅಲ್ಲ; 5 ಎಕರೆಯನ್ನು ಒಂದೇ ಕುಟುಂಬಕ್ಕೆ ಕೊಟ್ಟಿದ್ದೀರಿ ಎಂದು ಆಕ್ಷೇಪಿಸಿದರು. 10 ಎಸ್ಸಿ ಸಂಸ್ಥೆಗಳಿಗೆ 50 ಸೆಂಟ್ಸ್ ಕೊಟ್ಟರೆ ಅವು ಬದುಕುತ್ತಿದ್ದವು. ಅಂದರೆ ಏನಿದರ ಅರ್ಥ ಎಂದು ಕೇಳಿದರು.
ಪ್ರಭಾವಿಗಳಿಗೆ ನಿವೇಶನ ಕೊಡಲಾಗಿದೆ. ಸ್ವಜನಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕಾರ ಮಾಡಿರುತ್ತೇವೆ. ಇಲ್ಲಿ ಎಲ್ಲರಿಗೂ ಎಲ್ಲಿ ನ್ಯಾಯ ಕೊಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದರು. ಇದು ಪಬ್ಲಿಕ್ ಟ್ರಸ್ಟ್ ಅಲ್ಲ; ಒಂದು ಕುಟುಂಬದ ಟ್ರಸ್ಟ್ ಎಂದು ಗಮನ ಸೆಳೆದರು. ಈ ಸಂಬಂಧ ದೂರು ಕೊಡಲಿದ್ದೇವೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.