Kadaba: ಗಣೇಶನ ಅದ್ದೂರಿ ಶೋಭಾಯಾತ್ರೆಗೆ ಸಜ್ಜಾದ ಕಡಬದಲ್ಲಿ ಹೀಗೊಂದು ಸೌಹಾರ್ದತೆ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಏನು?

Dakshina Kannada news Celebration of Ganesh festival in Kadaba Hindu Muslim heartiness

Kadaba:ಸುಮಾರು 50 ವರ್ಷಗಳ ಹಿಂದೆ ಆರಂಭಗೊಂಡ ಕಡಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ಸುವರ್ಣ ಸಂಭ್ರಮಕ್ಕೆ ಅಣಿಯಾಗಿದ್ದು, ಮನೋರಂಜನಾ ಕಾರ್ಯಕ್ರಮಗಳ ಸಹಿತ ಮೂರು ದಿನಗಳ ಕಾಲ ನಡೆದ ವೈದಿಕ ಕಾರ್ಯಗಳ ಬಳಿಕ ಇಂದು ಅದ್ದೂರಿ ಶೋಭಾಯಾತ್ರೆಗೆ ಕಡಬದ ರಾಜ ರಸ್ತೆ ಸಜ್ಜಾಗಿದ್ದು,ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದತೆ ಸುದ್ದಿಯೊಂದು ಹರಿದಾಡಿದೆ.

ಕಡಬದ( Kadaba) ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಾಲಯದ ವಠಾರದಿಂದ ಹೊರಡುವ ಭವ್ಯ ಮೆರವಣಿಗೆ ಕಳಾರ, ಹೊಸಮಠದಿಂದ ಸಾಗಿ ಹೊಸಮಠದ ಗುಂಡ್ಯ ಹೊಳೆಯಲ್ಲಿ ವಿಸರ್ಜನೆಯಾಗುತ್ತದೆ.ರಸ್ತೆಯುದ್ದಕ್ಕೂ ತಳಿರು ತೋರಣ,ಕೇಸರಿ ಬಾವುಟಗಳಿಂದ ಸಿಂಗಾರ,ಕಟ್ಟೆಪೂಜೆಗಳಿದ್ದು ಡಿಜೆ,ಚೆಂಡೆ ಸಹಿತ ಮೆರವಣಿಗೆಗೆ ಕುಣಿತ ಭಜನಾ ತಂಡ ಮೆರುಗು ನೀಡಲಿದೆ.

ಹೀಗೇ ಮೆರವಣಿಗೆ ಸಾಗಿ ಬರುವ ಕಳಾರ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದು,ರಸ್ತೆ ಬದಿಯಲ್ಲೇ ಮುಹಮ್ಮದೀಯ ಜುಮಾ ಮಸೀದಿ ಇರುವ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಮುಂಬರುವ ಮಿಲಾದ್ ಸಂಭ್ರಮದ ಅಲಂಕಾರಕ್ಕಾಗಿ ರಸ್ತೆ ಬದಿಯಲ್ಲಿ ಕಂಬಗಳನ್ನು ಹಾಕಿದ್ದರು ಎನ್ನಲಾಗಿದೆ.

ಆದರೆ ಗಣೇಶನ ವಿಸರ್ಜನಾ ಮೆರವಣಿಗೆಯ ಅಲಂಕಾರಕ್ಕಾಗಿ ಸ್ಥಳೀಯ ಹಿಂದೂ ಯುವಕರು ಮುಸ್ಲಿಂ ಕಮಿಟಿಯಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದು,ಮುಸ್ಲಿಂ ಯುವಕರು ಹಾಕಿದ್ದ ಕಂಬದಲ್ಲಿ ಕೇಸರಿ ಧ್ವಜ ಹಾಕುವ ಬಗ್ಗೆ ವಿನಂತಿಸಿದ್ದರು. ಕೂಡಲೇ ಕಮಿಟಿ ಒಪ್ಪಿಗೆ ಸೂಚಿಸಿದ್ದು, ಕೇಸರಿ ರಾಜಾಜಿಸಲು ಮುಕ್ತ ಒಪ್ಪಿಗೆ ಸೂಚಿಸಿ ಸಹಕರಿಸಿದ್ದರು.

ಹಲವಾರು ವರ್ಷಗಳಿಂದ ಕಡಬದಲ್ಲಿ ಸಡಗರ, ಸಂಭ್ರಮದ ಜಾತ್ರೆ, ಊರೂಸ್ ನಡೆದುಕೊಂಡು ಬಂದಿದ್ದು, ಹಿಂದೂ-ಮುಸ್ಲಿಂ ಸೌಹಾರ್ದತೆ ಹೇಗಿದೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗುತ್ತದೆ.

ಇದನ್ನೂ ಓದಿ: ದಕ್ಷಿಣ ಕನ್ನಡ (ಪುತ್ತೂರು): ಬೆಕ್ಕಿನ ಕಣ್ಣಿನ ಸುಂದರಿಯರನ್ನು ಮೀರಿಸುವಂತ ಸೌಂದರ್ಯ ಹೊಂದಿದ ಬೆಕ್ಕಿನ ಕಣ್ಣಿನ ಹಾವು ಪತ್ತೆ!

Leave A Reply

Your email address will not be published.