ಇವರೇ ನೋಡಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ !

ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು ಮಧ್ಯಾಹ್ನ 12:30 ರಿಂದ 1:00 ಗಂಟೆಯ ಸುಮಾರಿಗೆ ಒಂದು ಸ್ಪಷ್ಟ ಚಿತ್ರಣ, ಒಂದು ಟ್ರೆಂಡ್ ದೊರೆಯಲಿದೆ.

ಅತ್ತ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ತಮ್ಮ ತಮ್ಮ ದೇಶ ಸರಕಾರ ಎಂದು ಹೇಳಿಕೊಳ್ಳುತ್ತಿವೆ. ಮುಖ್ಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಅತ್ಯಂತ ಆತ್ಮವಿಶ್ವಾಸದಿಂದ ಬೀಗುತ್ತಿದ್ದು ತಾವೇ ಸರ್ಕಾರ ರಚಿಸುವುದು ಎನ್ನುತ್ತಿದ್ದಾರೆ. ಈ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನುವ ಜಿಜ್ಞಾಸೆ ಮತ್ತು ಕುತೂಹಲ ಜನರಲ್ಲಿ ಉಳಿದಿದೆ.

ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಪಷ್ಟವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಲಿದ್ದಾರೆ. ಅವರು ಮುಖ್ಯಮಂತ್ರಿ ಆಗಿ ಬಲಿಷ್ಠ ಮಂತ್ರಿ ಮಂಡಲವನ್ನು ರಚಿಸಿ, ಸರ್ಕಾರವನ್ನು ಕಟ್ಟಿ ಹೇಳುವ ವರ್ಷಗಳ ಕಾಲ ಮುನ್ನಡೆಸಬೇಕು. ತದನಂತರ ಅಧಿಕಾರವನ್ನು ಅವರು ಡಿಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು. ಇದು ಕಾಂಗ್ರೆಸ್ ಪಾಳಯದಲ್ಲಿ ಇದೀಗ ಚಾಲ್ತಿಯಲ್ಲಿರುವ ಮುಖ್ಯಮಂತ್ರಿಗಾದಿಯ ಪ್ಲಾನ್. ಈ ಮಧ್ಯೆ ಜಿ. ಪರಮೇಶ್ವರ್ ತರದ ಕೆಲ ನಾಯಕರುಗಳು ಇದ್ದರೂ, ಸದ್ಯದ ಮಟ್ಟಿಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯುವುದು ದುರ್ಲಭ.

ಕಾಂಗ್ರೆಸ್ ಬಹುಮತ ಸಾಧಿಸಿದರೆ, ಹೆಚ್ಚು ಕಮ್ಮಿ ಮೊದಲಾರ್ಧಕ್ಕೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ. ಒಂದು ವೇಳೆ ವರುಣ ಸಿದ್ದರಾಮಯ್ಯನವರಿಗೆ ಕೈ ಕೊಟ್ಟರೆ ಸಿದ್ದು ಗತಿ ಅಧೋಗತಿಯಾಗಲಿದೆ. ಕಳೆದ ಸಲ ಹೇಗೆ ಕೊರಟಗೆರೆಯಲ್ಲಿ ಜಿ ಪರಮೇಶ್ವರ್ ಅವರು ಸೋತು ಮುಖ್ಯಮಂತ್ರಿ ಸ್ಥಾನದಿಂದ ವಿಮುಖರಾದರೋ ಅದೇ ಸ್ಥಿತಿ ಸಿದ್ದರಾಮಯ್ಯನವರಿಗೆ ಬರಲಿದೆ. ಮೈಸೂರಿನ ವರುಣದ ಸವಾಲನ್ನು ಮೊದಲು ಸಿದ್ದರಾಮಯ್ಯನವರು ಗೆಲ್ಲಬೇಕು, ಆಗ ಅವರ ಮುಖ್ಯಮಂತ್ರಿಯ ಕುರ್ಚೆ ಕನಸು ಸಲೀಸು!

ಅತ್ತ ಬಿಜೆಪಿಯಲ್ಲಿ ಮುಖ್ಯಮಂತ್ರಿ ಪಟ್ಟದ ಬಗ್ಗೆ ಜಾಸ್ತಿ ಗೊಂದಲಗಳಿಲ್ಲ. ಬಹುಮತ ಸಾಧಿಸಿದರೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಲಿದ್ದಾರೆ. ಬೊಮ್ಮಾಯಿ ಅವರು ಪಕ್ಷೇತರ ಶಿಗ್ಗಾವ್ ನಲ್ಲಿ ಜಯಸಾಧಿಸುವುದು ಖಚಿತ. ಆದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಬೊಮ್ಮಾಯಿ ಅವರು ಮತ್ತೆ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ. ಮೊದಲ ಎರಡು ವರ್ಷ ಅವರನ್ನು ಅಧಿಕಾರದಲ್ಲಿ ಇರಲು ಬಿಜೆಪಿ ನಾಯಕತ್ವ ನೀಡಲಿದೆ. ಮುಂದಿನ 3 ವರ್ಷಗಳಲ್ಲಿ ಹೊಸ ನಾಯಕತ್ವದ ಹುಡುಕಾಟ ನಡೆಸಿದರೂ ನಡೆಸೀತು ಕೇಂದ್ರ ಬಿಜೆಪಿ. ಯಾಕೆಂದರೆ ಬಿಜೆಪಿ ಹೈಕಮಾಂಡ್ ಯಾವಾಗಲೂ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತದೆಯಲ್ಲವೇ?

ಇನ್ನೊಂದು ಕಡೆ ಅತಂತ್ರ ವಿಧಾನಸಭೆ ಆದರೆ ಜೆಡಿಎಸ್ ಪುಟಿದೇಳುತ್ತದೆ. ಈಗಾಗಲೇ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಕುಮಾರ ಸ್ವಾಮಿ. ಆದರೆ ಕೈಯಲ್ಲಿ ಕೇವಲ 25 ಸೀಟುಗಳನ್ನು ಇಟ್ಟುಕೊಂಡು ಈ ಬಾರಿ ಕೂಡಾ ಮುಖ್ಯಮಂತ್ರಿ ಪಟ್ಟ ಕೊಡಲು ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಸುತಾರಾಂ ರೆಡಿ ಇಲ್ಲ. ಈ ಸಲ ಒಂದಂತೂ ನಿಜ, ಅತಂತ್ರ ವಿಧಾನಸಭೆ ಉಂಟಾದರೆ ಜೆಡಿಎಸ್ ಪಾಲಿಗೆ ಅವಕಾಶಗಳು ಅದೆಷ್ಟು ಹೇರಳವೋ, ಅಷ್ಟೇ ಪ್ರಮಾಣದ ಥ್ರೀಟ್ ಕೂಡಾ ಇದೆ. ಅಂದರೆ, ಜೆಡಿಎಸ್ ಅನ್ನು ಈ ಸಾರಿ ಒಡೆದು ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ಹೊಂಚಿ ಹಾಕಿ ಕೂತಿವೆ. ಈ ಸಾರಿ ಜೆಡಿಎಸ್ ಪಾಲಿಗೆ ಅಗ್ನಿಪರೀಕ್ಷೆಯೇ ಸರಿ. ಇವೆಲ್ಲವೂ ನಿರ್ಧಾರವಾಗುವುದು ಅತಂತ್ರ ಫಲಿತಾಂಶ ಉಂಟಾದರೆ ಮಾತ್ರ. ಒಂದೊಮ್ಮೆ ಬಿಜೆಪಿ ಅಥವಾ ಕಾಂಗ್ರೆಸ್ ಕನಿಷ್ಠ 113 ಸೀಟುಗಳನ್ನು ಗೆದ್ದು ಬಹುಮತ ಸಾಧಿಸಿದರೆ, ಬಸವರಾಜ್ ಬೊಮ್ಮಾಯಿ ಅಥವಾ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಆಗುವುದು ಖಚಿತ.

Leave A Reply

Your email address will not be published.