ಜಮೀನು ಹದ್ದುಬಸ್ತಿನ ಪ್ರಕ್ರಿಯೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಒಬ್ಬ ವ್ಯಕ್ತಿ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಏನೇನು ಮಾಡಬೇಕು ಹಾಗೂ ಯಾವ ದಾಖಲೆಗಳು ಆತನ ಬಳಿ ಇರಬೇಕು ಎಂಬ ಮಾಹಿತಿಯನ್ನು ತಿಳಿದಿರುವುದು ಅವಶ್ಯಕ.

ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಸ್ಥಳ, ಯಾವ ದಾಖಲೆಗಳು ಬೇಕಾಗುತ್ತದೆ? ಹದ್ದು ಬಸ್ತು ಹಾಕಿದರೆ ಅದರಿಂದ ಆಗುವ ಲಾಭವೇನು? ಜೊತೆಗೆ ಹದ್ದುಬಸ್ತಿನ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ಭೂಮಾಲೀಕರು ತಿಳಿದುಕೊಳ್ಳುವುದು ಒಳ್ಳೆಯದು. ಪ್ರತಿ ಜಮೀನಿಗೂ ಹದ್ದುಬಸ್ತು ಅತ್ಯಗತ್ಯ. ಅಷ್ಟಕ್ಕೂ ಹದ್ದು ಬಸ್ತು ಅಂದರೆ ಏನಪ್ಪಾ ಅಂತ ಗೊತ್ತಿಲ್ಲ….ಅಂತ ಇದ್ದರೆ ನಾವು ಹೇಳ್ತೀವಿ ಕೇಳಿ!!!.

ಹದ್ದುಬಸ್ತು ಅಂದರೆ, ಭೂಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನು ಅಳತೆ ಮಾಡಿ ಅಳಿಸಿ ಹೋಗಿರುವ ಗಡಿ ಭಾಗವನ್ನು ಪುನಃ ಪತ್ತೆ ಹಚ್ಚಿ ಗುರುತು ಮಾಡುವ ಪ್ರಕ್ರಿಯೆ. ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪಕರು ಭೂಮಾಲೀಕನ ಜಮೀನಿಗೆ ಬರುತ್ತಾರೆ. ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.

ಪೋಡಿಯಾದ ಜಮೀನು ಅಥವಾ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ ಸಂದರ್ಭ ಆ ಜಾಗವನ್ನು ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದನ್ನು ಕೂಡ ಹದ್ದು ಬಸ್ತು ಎನ್ನಬಹುದು. ಹಾಗಾದ್ರೆ.. ಒತ್ತುವರಿಯಾಗಿರುವ ಜಮೀನಿಗೆ ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ವೇಳೆ, ಅರ್ಜಿದಾರನಿಗಾಗಲಿ ಅಥವಾ ಪಕ್ಕದ ಜಮೀನುದಾರನಿಗಾಗಲಿ ಈ ಅಳತೆಯಿಂದ ಸಮಾಧಾನವಾಗಿಲ್ಲವೆಂದಾಗ ಕೂಡ ಮತ್ತೆ ಮೇಲ್ಮನವಿ ಸಲ್ಲಿಸುವ ಅವಕಾಶ ಕೂಡ ಇದೆ.

ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕೆಂದರೆ, ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲುಗಳ ನಾಶವಾಗಿದ್ದಲ್ಲಿ, ಪಕ್ಕದ ಜಮೀನುದಾರರು ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಬಂದಾಗ, ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಅರ್ಜಿ ಸಲ್ಲಿಸಬಹುದು. ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಜಮೀನುದಾರ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಹಣಿ/ ಆರ್ ಟಿಸಿ 3 ನಮೂನೆ ಬೇಕಾಗುತ್ತದೆ.

ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣದ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ, ಹದ್ದು ಬಸ್ತು ಮಾಡಿಕೊಂಡರೆ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ, ಎಷ್ಟು ಪ್ರದೇಶ ಒತ್ತುವರಿಯಾಗಿದೆ. ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತು ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ನಿಖರವಾದ ಗಡಿ ಗುರುತಿಸಲು ಸಾಧ್ಯವಾಗುತ್ತದೆ.

ಈ ಹಿಂದೆ ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀಕರಿಗೆ ವರ್ಗಾಗಣೆ ಮಾಡಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಈ ಹಿಂದೆ ಭಾರಿ ಏರಿಕೆ ಮಾಡಲಾಗಿತ್ತು.ಆ ಬಳಿಕ , ಈ ಕುರಿತಾಗಿ ಆಕ್ಷೇಪಣೆ ಬಂದ ಬಳಿಕ ಶುಲ್ಕ ಏರಿಕೆಯನ್ನು ಕೊಂಚ ಮಟ್ಟಿಗೆ ಇಳಿಸಲಾಗಿದೆ.

ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಸರ್ವೆ ಅಥವಾ ಹಿಸ್ಸಾ ಸರ್ವೆ ನಂಬರಿಗೆ ಜಮೀನುದಾರರ ಅರ್ಜಿ ಶುಲ್ಕ 35 ರೂ. ಮಾತ್ರ ಪಾವತಿ ಮಾಡಲಾಗುತ್ತಿತ್ತು. ಆದರೆ, ಈಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆಂದು ಪ್ರತ್ಯೇಕಿಸಿ 4 ಸಾವಿರ ರೂ.ವರೆಗೆ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ 2 ಎಕರೆವರೆಗೆ 1500 ರೂ. ಮತ್ತು ಎರಡು ಎಕರೆಗಿಂತ ಹೆಚ್ಚು ಪ್ರತಿ ಎಕರೆಗೆ ಹೆಚ್ಚುವರಿ 300 ರೂ. ಶುಲ್ಕ ವಿಧಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ??

ಎಲ್ಲ ದಾಖಲೆಗಳನ್ನು ಪಡೆದುಕೊಂಡ ನಂತರ ಅರ್ಜಿ ಪಡೆದು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಬೇಕಾಗುತ್ತದೆ. ಅರ್ಜಿಯಲ್ಲಿ ಮುಖ್ಯವಾಗಿ ಚೆಕ್ಕುಬಂದಿ ವಿವರ ಕೇಳಿರುತ್ತಾರೆ. ಜೊತೆಗೆ ಜಮೀನಿನ ಅಕ್ಕ ಪಕ್ಕದವರ ಹೆಸರು, ಅವರ ಮೊಬೈಲ್ ನಂಬರ್, ಹಾಗೂ ವಿಳಾಸವನ್ನು ಭರ್ತಿ ಮಾಡಿ ನಿಮ್ಮ ಹೋಬಳಿಯಲ್ಲಿರುವ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ಅಕ್ಯುಲಾಜ್ ಮೆಂಟ್ (ಅರ್ಜಿ ಸಲ್ಲಿಸಿದ ರಸೀದಿ) ಪಡೆದುಕೊಳ್ಳಬೇಕು.

ಬಳಿಕ, ಈ ಅರ್ಜಿಯನ್ನು ಭೂಮಾಪಕರಿಗೆ ಕಳುಹಿಸಲಾಗುತ್ತದೆ. ಭೂಮಾಪಕರು ಅರ್ಜಿದಾರರಿಗೆ ಹಾಗೂ ಪಕ್ಕದ ಜಮೀನುದಾರರಿಗೆ ಮುಂಚಿತವಾಗಿ ನೋಟಿಸ್ ಕೊಟ್ಟು ದಿನಾಂಕವನ್ನು ನಿಗದಿ ಮಾಡುತ್ತಾರೆ ಅವರು ಹೇಳಿರುವ ದಿನಾಂಕದಂದು ಅರ್ಜಿದಾರರ ಮತ್ತು ಪಕ್ಕದ ಜಮೀನುದಾರರ ಸಮ್ಮುಖದಲ್ಲಿ ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕೆಲಸ ನಡೆಯುವುದು. ಅಳತೆ ಕಾರ್ಯ ಮುಗಿದ ನಂತರ ಅರ್ಜಿದಾರ ಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಇದರ ಹೇಳಿಕೆ ಪ್ರತಿಯಾಗಲಿ ಅಥವಾ ನೋಟಿಸ್ ಪ್ರತಿ ಮತ್ತು ಹದ್ದುಬಸ್ತಿನ ನಕ್ಷೆ ಪ್ರತಿಗಳನ್ನು ಅರ್ಜಿದಾರರಾಗಲಿ ಅಥವಾ ಪಕ್ಕದ ಜಮೀನುದಾರರಾಗಲಿ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿ ಸ್ವೀಕರಿಸಬಹುದು.

Leave A Reply

Your email address will not be published.