ಪ್ರೇಯಸಿಯ ಆಸೆ ತೀರಿಸಲು ಗೋವಾಗೆ ಕರೆದುಕೊಂಡು ಹೋದ ಯುವಕ ಬೀಚ್ ನಲ್ಲಿ ಸಿಕ್ಕಿಬಿದ್ದ! ಅಷ್ಟಕ್ಕೂ ಆದದ್ದೇನು?

ಹದಿಹರೆಯದ ವಯಸ್ಸೆಂದರೆ ಹಾಗೆ. ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಪ್ರೀತಿ, ಪ್ರೇಮಗಳಿಗಾಗಿ ಹಾತೊರೆಯುವ ಕಾಲವದು. ಈ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಾವ ಕ್ಷಣದಲ್ಲಾದರೂ ಪ್ರೀತಿ ಹುಟ್ಟಿಕೊಳ್ಳಬಹುದು. ಆದರೆ ಇಲ್ಲೊಬ್ಬ ಪ್ರೀತಿಯಲ್ಲಿ ಬಿದ್ದ ಯುವಕ ಪ್ರೇಯಸಿಯ ಆಸೆ ತೀರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಆತ ಮಾಡಿದ ಅಂತಹ ಘನಂದಾರಿ ಕೆಲಸವಾದರೂ ಏನು ಎಂದು ತಿಳಿದುಕೊಳ್ಳಬೇಕಾ? ಹಾಗಾದರೆ ಈ ಸ್ಟೋರಿ ಓದಿ.

ಪೋಲಿಸರ ಅತಿಥಿಯಾಗಿರುವ ಈ ಪ್ರೇಮಿಯ ಹೆಸರು ಮಹಮ್ಮದ್ ಇರ್ಫಾನ್. ಬೆಂಗಳೂರಿನ ಆಡುಗೋಡಿನಲ್ಲಿ ತನ್ನ ತಾಯಿ, ಅಣ್ಣ ಹಾಗೂ ಅತ್ತಿಗೆ ಜೊತೆಗೆ ವಾಸವಾಗಿದ್ದಾನೆ. ಬದುಕಿನ ಕುರಿತು ಕಿಂಚಿತ್ತೂ ಜವಾಬ್ದಾರಿಯ ಸೋಗಿಲ್ಲದ ಈತ ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ರೇಯಸಿಯ ಹಿಂದೆಯೇ ಸುತ್ತುತ್ತ ಕಾಲ ಕಳೆಯುತ್ತಿದ್ದನು. ಕೈಯಲ್ಲಿ ಒಂದು ಉದ್ಯೋಗ ಇಲ್ಲದಿದ್ದರೂ, ಒಂದು ಪೈಸೆ ಹಣ ಇಲ್ಲದಿದ್ದರೂ ಕೂಡ ಒಮ್ಮೆ ಪ್ರೇಯಸಿಗೆ ಏನು ಬೇಕು ಎಂದು ಕೇಳಿದ್ದಾನೆ. ಈ ವೇಳೆಯಲ್ಲಿ ಪ್ರೇಯಸಿ ಗೋವಾಕ್ಕೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.

ಕೈಯಲ್ಲಿ ಹಣವಿಲ್ಲದೇ ಇದ್ದರು ತನ್ನ ಪ್ರಿಯತಮೆಯ ಆಸೆ ತೀರಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಇವನು ಮಾಡಿದ ಕೆಲಸ ಕೇಳಿದ್ರೆ ನೀವೇ ಬೆರಗಾಗ್ತೀರಾ! ಹೌದು ಈ ಭೂಪ ತನ್ನ ಸ್ವಂತ ಮನೆಗೇ ಕನ್ನ ಹಾಕಿ ಪ್ರೇಯಸಿಯೊಂದಿಗೆ ಗೋವಾಕ್ಕೆ ಹಾರಿದ್ದಾನೆ. ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮನೆಯಲ್ಲಿದ್ದ 103 ಗ್ರಾಮ್ ಚಿನ್ನಾಭರಣ ದೋಚಿದ್ದು, ಚಿನ್ನವನ್ನೆಲ್ಲಾ ಗಿರವಿ ಅಂಗಡಿಯಲ್ಲಿಟ್ಟು, ಲಕ್ಷ ಲಕ್ಷ ಹಣ ಕೈಯಲ್ಲಿಡಿದುಕೊಂಡು ಗೋವಾಕ್ಕೆ ತೆರಳಿದ್ದಾನೆ. ಈ ವೇಳೆಯಲ್ಲಿ ಮನೆಯಲ್ಲಿರುವ ಆಭರಣ ಕಾಣದೇ ಇದ್ದಾಗ ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಗೆ ಬಂದು ತನಿಖೆ ಮಾಡಿದ ಪೊಲೀಸರಿಗೆ ಮನೆಯಲ್ಲಿ ಇರ್ಫಾನ್ ಕಾಣದಿದ್ದಾಗ ಅನುಮಾನ ಹುಟ್ಟಿದೆ. ಮನೆಯವರ ಬಳಿ ಇರ್ಫಾನ್ ಬಗ್ಗೆ ವಿಚಾರಿಸಿದಾಗ ಗೆಳೆಯರ ಜೊತೆ ಗೋವಾಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ. ಆಗ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿದ್ದು ತಕ್ಷಣವೇ ತಂಡ ರಚನೆ ಮಾಡಿ ಗೋವಾಕ್ಕೆ ತೆರಳಿದ್ದಾರೆ.

ಗೋವಾ ಬೀಚ್ ನಲ್ಲಿ ಹಾಯಾಗಿ ಮನದರಸಿಯೊಡನೆ ತಿರುಗಾಡಿಕೊಂಡಿದ್ದ ಇರ್ಫಾನನ್ನು ಕೊನೆಗೂ ಪೊಲೀಸರು ಬೀಚ್‌ನಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆತನನ್ನು ಕರೆದುಕೊಂಡು ಹೋಗಿ ಗಿರವಿಯಿಟ್ಟಿದ್ದ ಚಿನ್ನವನ್ನು ಪಡೆದುಕೊಂಡಿದ್ದಾರೆ. ಆದರೆ ಪ್ರೇಯಸಿಯ ಆಸೆ ತೀರಿಸಲು ಹೋಗಿ ಈ ಪ್ರೇಮಿ ಪೊಲೀಸರ ಅತಿಥಿಯಾದದ್ದಂತು ಸತ್ಯ.

Leave A Reply

Your email address will not be published.