ಕಕ್ಕಿಂಜೆಯಲ್ಲಿ ಕಂಡು ಬಂದ ಉಪಗ್ರಹ ಕರೆ ಹಾಗೂ ಸ್ಫೋಟದ ಶಬ್ದ: ದ.ಕ. ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ಧರ್ಮಸ್ಥಳದ ಕಕ್ಕಿಂಜೆ ಗ್ರಾಮದ ಬಳಿ ಉಪಗ್ರಹ ಕರೆಗಳು ಮತ್ತು ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂಬ ವದಂತಿಯು ಹರಡಿತ್ತು. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ವದಂತಿಗಳನ್ನು ಪರಿಶೀಲಿಸಿದ್ದು, ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಾನೆ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.

ಸ್ಫೋಟದ ಶಬ್ದಗಳು ಸಾಮಾನ್ಯವಾಗಿ ಸ್ಥಳೀಯ ನಿವಾಸಿಗಳು ಆನೆಗಳನ್ನು ಹೆದರಿಸಲು ಬಳಸುವ ಪಟಾಕಿಗಳಿಗೆ ಸಂಬಂಧಿಸಿವೆ ಹಾಗೂ ಉಪಗ್ರಹ ಕರೆಗಳ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ದೃಢಪಟ್ಟಿಲ್ಲ ಎಂದು ಸೋನಾವಾನೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ಕೃತ್ಯದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದ ಬಾರೆ ಎಂಬಲ್ಲಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಬೆಳಕಿಗೆ ಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್‌ಸ್ಪೆಕ್ಟರ್ ಚಿಂದಾನಂದ ಮತ್ತು ತಂಡ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಟಲೈಟ್ ಕರೆ ಹೋದ ಸ್ಥಳವನ್ನು ಪತ್ತೆ ಹಚ್ಚಿದ್ದು ಅಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ಯಾವುದೇ ಇತರ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.