ಕಡಬದ ಕೊಯಿಲದಲ್ಲಿ ಕೃಷಿ ತೋಟಗಳಿಗೆ ಕಾಡುಕೋಣಗಳ ಲಗ್ಗೆ

Share the Article

ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾ ನಗರ ಸುತ್ತಮುತ್ತ ಪರಿಸರದ ಕೃಷಿ ತೋಟಗಳಿಗೆ ಕಳೆದೊಂದು ವಾರದಿಂದ ರಾತ್ರಿ ವೇಳೆ ಕಾಡುಕೊಣ ಲಗ್ಗೆ ಇಟ್ಟು ಹಾನಿ ಮಾಡುತ್ತಿದೆ.

ಕಳೆದ ಎರಡು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಕೆಲ ದಿನಗಳ ಕಾಲ ಬೀಡುಬಿಟ್ಟು ರಾತ್ರಿ ವೇಳೆ ಕೃಷಿ ತೋಟಗಳಿಗೆ ಹಾನಿ ಮಾಡಿತ್ತು. ಇದೀಗ ಒಂದು ವಾರದಿಂದ ಈ ಪರಿಸರದ ಪಟ್ಟೆದಮೂಲೆ, ಸಬಳೂರು ಭಾಗದ ಕೃಷಿಕರ ತೋಟಗಳಿಗೆ ಹಾನಿಮಾಡುತ್ತಿದೆ. ಕೆಲವೊಂದು ಸಾರಿ ರಸ್ತೆ ಸಂಚಾರಿಗಳಿಗೂ ಕಾಣಿಸಿಕೊಂಡಿದೆ. ತೋಟಗಳಲ್ಲಿ ತಡೆಬೇಲಿಗೆ ನೆಟ್ಟ ಗಿಡಗಳನ್ನು ಸಂಪೂರ್ಣ ತಿಂದು ಹಾಕುತ್ತಿದೆ, ಮೇವಿಗಾಗಿ ನಾಟಿ ಮಾಡಲಾದ ಹುಲ್ಲು, ನೈಸರ್ಗಿಕವಾಗಿ ತೋಟದಲ್ಲಿ ಬೆಳೆದ ಹುಲ್ಲನ್ನು ತಿನ್ನುತ್ತಿರುವುದರಿಂದ ಗೋವುಗಳಿಗೆ ಹುಲ್ಲ ಇಲ್ಲದಂತ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಕೃಷಿಕ ರಾಜೀವ ಪಟ್ಟೆದಮೂಲೆ ಅವರು. ರಾತ್ರಿ ವೇಳೆ ಕಾಣಿಸಿಕೊಳ್ಳುವ ಕಾಡುಕೊಣಗಳು ಹಗಲು ವೇಳೆ ಪಕ್ಕದ ಬಿರ್ಮರ ಗುಡ್ಡೆಯಲ್ಲಿ ಉಳಿದುಕೊಳ್ಳುತ್ತವೆ ಎನ್ನುವ ಶಂಕೆ ಈ ಭಾಗದ ರೈತರು ವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ಕೃಷಿಕರು ಅಗ್ರಹಿಸಿದ್ದಾರೆ.

Leave A Reply