Bengaluru : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಹೆಸರು ಬದಲಿಸಿದ ಸರ್ಕಾರ – ವಿವಾದಕ್ಕೆ ಗುರಿಯಾದ ಹೊಸ ಹೆಸರು

Bengaluru : ಬೆಂಗಳೂರಿನ ಆಡಳಿತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಇತಿಹಾಸ ಪುಟಕ್ಕೆ ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿರುವುದು ಸಹ ಅದರಲ್ಲಿ ಒಂದಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಮಾರಸ್ವಾಮಿ ಲೇಔಟ್ ವಾರ್ಡ್ ಹೆಸರನ್ನು ಬದಲಾವಣೆ ಮಾಡಿ ಸರ್ಕಾರವು ಇದೀಗ ವಿವಾದಕ್ಕೆ ಗುರಿಯಾಗಿದೆ.

ಹೌದು, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಈ ವಾರ್ಡ್ನ ಹೆಸರನ್ನು ಯಾರಬ್ ನಗರ ವಾರ್ಡ್ ಎಂದು ಬದಲಾಯಿಸಲಾಗಿದೆ. ಈ ಬೆನ್ನಲ್ಲೇ ಕುಮಾರಸ್ವಾಮಿ ಲೇಔಟ್ನ ಹೆಸರನ್ನು ‘ಯಾರಬ್ ನಗರ’ ಎಂದು ಬದಲಾಯಿಸಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಕ್ರಮವು ಕಾಂಗ್ರೆಸ್ ಸರ್ಕಾರದ *ತುಷ್ಟೀಕರಣ ರಾಜಕಾರಣದ ಭಾಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್ ‘ಹಿಂದೂ ದ್ವೇಷಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂದು ರಾಮನ ಹೆಸರು ಇರುವ ಕಾರಣಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ. ಇಂದು ಕುಮಾರಸ್ವಾಮಿ ಹೆಸರು ಇರುವ ಕಾರಣಕ್ಕೆ ಕುಮಾರಸ್ವಾಮಿ ಲೇಔಟ್ ಹೆಸರು ಬದಲಾವಣೆ. ಓಲೈಕೆಗೂ ಒಂದು ಮಿತಿ ಬೇಡವೇ ಡಿ.ಕೆ ಶಿವಕುಮಾರ್ ಅವರೇ ? ಕುಮಾರಸ್ವಾಮಿ ದೇವರ ದೇವಸ್ಥಾನ ಇರುವ ಕಾರಣ ಕುಮಾರಸ್ವಾಮಿ ಲೇಔಟ್ ವಾರ್ಡ್ ಎಂದು ನಾಮಕರಣ ಮಾಡಲಾಗಿತ್ತು. ಈಗ ಹೆಸರು ಬದಲಾಯಿಸಲು ಅಲ್ಲಿನ ಸ್ಥಳೀಯ ನಿವಾಸಿಗಳು ಅರ್ಜಿ ಹಾಕಿದ್ದರಾ ಬೆಂಗಳೂರು ಉಸ್ತುವಾರಿ ಸಚಿವರೇ’ ಎಂದು ಪ್ರಶ್ನೆ ಮಾಡಿದೆ.
Comments are closed.