ಪುನೀತ್ ಕೆರೆಹಳ್ಳಿಗೆ ಸನ್ಮಾನ! ನನ್ನಿಂದ ತಪ್ಪಾಗಿದೆ, ವಿಷಾದಿಸುತ್ತೇನೆ: ಮಾಜಿ ನ್ಯಾ. ಸಂತೋಷ್ ಹೆಗ್ಡೆ


ಬೆಂಗಳೂರು: ಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನ್ಯಾ. ಸಂತೋಷ್ ಹೆಗ್ಡೆ ಅವರು ಸನ್ಮಾನ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿತ್ತು. ನ್ಯಾ.ಸಂತೋಷ್ ಹೆಗ್ಡೆ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು, ಪುನೀತ್ ಕೆರೆಹಳ್ಳಿಗೆ ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಮಾಜೀ ನ್ಯಾಯಮೂರ್ತಿಗಳು ಕ್ಷಮೆ ಯಾಚಿಸಿದ್ದಾರೆ.
ರಾಜ್ಯೋತ್ಸವ ಸನ್ಮಾನದ ಫೋಟೋಗಳನ್ನು ಪುನೀತ್ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ನೆಟ್ಟಿಗರು ಸಂತೋಷ್ ಹೆಗ್ಡೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಗೆ ನೀವು ಸನ್ಮಾನ ಮಾಡಿದ್ದೀರಿ. ಆತನ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಂತೋಷ್ ಹೆಗ್ಡೆ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ, ಅಲ್ಲಿ ಯಾರಿಗೆ ಪ್ರಶಸ್ತಿ ಕೊಡುತ್ತಿದ್ದೇನೆ ಎಂದು ನನಗೆ ಗೊತ್ತಿರಲಿಲ್ಲ. ಸಾಮಾನ್ಯವಾಗಿ ಪ್ರಶಸ್ತಿ ನೀಡುವಾಗ ನಾವು ಪ್ರಶಸ್ತಿ ಪಡೆಯುವವರ ಬಯೋಡಾಟಾ ಪರಿಶೀಲಿಸಲು ಆಗಲ್ಲ. ಅಲ್ಲದೆ ವೇದಿಕೆ ಮೇಲೆ ನಾನೊಬ್ಬನೇ ಪ್ರಶಸ್ತಿಯನ್ನ ಕೊಟ್ಟಿಲ್ಲ, ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖ್ಯ ನ್ಯಾಯಾಮೂರ್ತಿಯೂ ಇದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಇವತ್ತು ನನಗೂ ಪ್ರಶಸ್ತಿ ನೀಡುವ ಕಾರ್ಯಕ್ರಮವಿದೆ. ಅದಕ್ಕೂ ನಾನು ಹೋಗುವುದಿಲ್ಲ ಎಂದಿದ್ದಾರೆ ನ್ಯಾ. ಸಂತೋಷ್ ಹೆಗ್ಡೆ.
Comments are closed.