ವಿಜಯ್ ಮಲ್ಯಗೆ ಬ್ಯಾಂಕ್’ಗಳ ವಂಚನೆ? SBI ಸೇರಿ 10 ಬ್ಯಾಂಕ್’ಗೆ ನೋಟಿಸ್, ತಪ್ಪಿದ 5000 ಕೋ.ಲೆಕ್ಕ

Share the Article

ಬೆಂಗಳೂರು: ಬ್ಯಾಂಕುಗಳು ವಿಜಯ್ ಮಲ್ಯ ವಿರುದ್ಧ ಕೇಸು ಹಾಕಿ ಇದ್ದ ಬದ್ದ ಆಸ್ತಿಗಳನ್ನು ಹರಾಜು ಹಾಕಿಕೊಂಡದ್ದು, ಹಣ ವಸೂಲಿ ಮಾಡಿಕೊಂಡದ್ದು ಹಳೆಯ ಸುದ್ದಿ. ಇದೀಗ ವಿಜಯ್ ಮಲ್ಯ ಸರದಿ. ಲಿಕ್ಕರ್ ಕಿಂಗ್ ವಿಜಯ್ ಮಲ್ಯ ಇದೀಗ ಬ್ಯಾಕ್ ಗಳ ಮೇಲೆ ದಾವೆ ಹೂಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲು ಕೋರ್ಟ್ ಅಸ್ತು ಅಂದಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಉದ್ಯಮಿ ವಿಜಯ್ ಮಲ್ಯ, ತಾವು ಪಾವತಿಸಬೇಕಿರುವುದಕ್ಕಿಂತ ಹೆಚ್ಚು ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕ್​ಗಳ ವಿರುದ್ಧವೇ ಸಲ್ಲಿಸಿದ ಅರ್ಜಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಒಪ್ಪಿ, ವಿಚಾರಣೆಯನ್ನು ಸೆಪ್ಟೆಂಬರ್‌ಗೆ ನಿಗದಿ ಮಾಡಿದೆ.

ತಮ್ಮ ಸಾಲದ ಒಟ್ಟು ಮೊತ್ತ ಮತ್ತು ವಸೂಲಿ ಮಾಡಿದ ಮೊತ್ತದ ವಿವರ ನೀಡುವಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉದ್ಯಮಿ ವಿಜಯ್ ಮಲ್ಯ ಮತ್ತು ಈಗ ದಿವಾಳಿಯಾಗಿರುವ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್‌ಎಲ್)ನ ನಿರ್ದೇಶಕ ದಲ್ಜಿತ್ ಮಹಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಸಾಲ ವಸೂಲಿ ನ್ಯಾಯಮಂಡಳಿಯು 2017ರ ಏಪ್ರಿಲ್‌ 10ರಂದು ಮಾಡಿರುವ ಮಾರ್ಪಡಿಸಲಾದ ತಿದ್ದುಪಡಿ ಅನುಸಾರ ಅರ್ಜಿದಾರ ಯುನೈಟೆಡ್‌ ಬ್ರೀವರೀಸ್‌ ಹೋಲ್ಡಿಂಗ್‌ ಸಂಸ್ಥೆ(ದಿವಾಳಿ ಒಳಗಾಗಿರುವ ಸಂಸ್ಥೆ) ಹಾಗೂ ಇತರೆ ಸಾಲ ಪಡೆದಿರುವ ಸಂಸ್ಥೆಗಳು ತಮಗೆ ನೀಡಬೇಕಿರುವ ಬಡ್ಡಿ ಒಳಗೊಂಡ ಹಣಕಾಸಿನ ವಿವರದ ಪಟ್ಟಿ ಹಾಗೂ ಈಗಾಗಲೇ ಸಂಸ್ಥೆಯಿಂದ ವಶ ಮಾಡಿಕೊಂಡ ಸ್ವತ್ತಿನ ಮಾಹಿತಿ ನೀಡುವಂತೆ ಸಾಲದಾತ ಸಂಸ್ಥೆಗಳಿಗೆ ಆದೇಶಿಸುವಂತೆ ವಿಜಯ್‌ ಮಲ್ಯ ಹಾಗೂ ದಲ್ಜಿತ್‌ ಮಹಲ್‌ ಕೋರಿದ್ದಾರೆ.
ಒಟ್ಟಾಗಿ 6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಆದರೆ 14,000 ಕೋಟಿ ರೂ. ವಸೂಲಾಗಿದೆ. ಹೀಗೆಂದು ಖುದ್ದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಮತ್ತೊಂದೆಡೆ ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ವಸೂಲಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ಬ್ಯಾಂಕ್​ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್​ಗೆ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಜನ್ ಪೂವಯ್ಯ ಮನವಿ ಮಾಡಿದರು.

ಆಲಿಸಿದ ಕೋರ್ಟ್, ಸಾಲ ವಸೂಲಾತಿ ನ್ಯಾಯಮಂಡಳಿಯ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್, ಪ್ರಸ್ತುತ ಅರ್ಜಿ ಮತ್ತು ಇನ್ನೊಂದು ಡಬ್ಲ್ಯೂಪಿ 3357/2025 ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಗಮನಿಸಿದರು. ವಸೂಲಾತಿ ಅಧಿಕಾರಿಗಳು, ಭಾರತೀಯ ಸ್ಟೇಟ್‌ ಬ್ಯಾಂಕ್‌ ಸೇರಿದಂತೆ 10 ಬ್ಯಾಂಕ್‌ಗಳಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ.

ಒಂದು ವೇಳೆ ಬ್ಯಾಂಕ್ ಗಳು ಹೆಚ್ಚಿನ ವಸೂಲಿ ಮಾಡಿದ್ದರೆ, ಆವು ಮಲ್ಯಗೆ ಹಣ ವಾಪಸ್ ಮಾಡಬೇಕಿರುತ್ತದೆ. ವಸೂಲಾದ ಮತ್ತು ಸಾಲದ ವ್ಯತ್ಯಾಸ 5,000 ಕೋಟಿ ರೂಪಾಯಿಗೂ ಅಧಿಕ ಇರುವ ಕಾರಣ, ಒಂದು ವೇಳೆ ಬ್ಯಾಂಕುಗಳು ಹೆಚ್ಚಿನ ಹಣ ವಸೂಲಿ ಮಾಡಿದ್ದರೆ ಅದನ್ನೆಲ್ಲ ವಾಪಸ್ ಪಡಕೊಂಡು ಮಲ್ಯ ಭಾರತಕ್ಕೆ ಎಂಟ್ರಿ ಕೊಡಲಿದ್ದಾರೆ. ಮತ್ತೆ ಭಾರತದಲ್ಲಿ ತಮ್ಮ ಎರಡನೆಯ ಇನ್ನಿಂಗ್ಸ್ ಶುರುಮಾಡಲಿದ್ದಾರೆ ಎನ್ನಲಾಗುತ್ತಿದೆ.

Comments are closed.