SIT: ಧರ್ಮಸ್ಥಳ ಅಪರಾಧಗಳ ಕೃತ್ಯ ತನಿಖೆ – SIT ತಂಡದಿಂದ ಹಿಂದೆ ಸರಿದ ಇಬ್ಬರು ಅಧಿಕಾರಿಗಳು!!

SIT: ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತು ತನಿಖೆ ನಡೆಸಲು ಕೊನೆಗೂ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಆದೇಶ ಹೊರಡಿಸಿದೆ. ಈಗಾಗಲೇ ತನಿಖೆ ತಂಡ ತನ್ನ ಕಾರ್ಯವನ್ನು ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದರ ಬೆನ್ನಲ್ಲೇ ಇಬ್ಬರು ಅಧಿಕಾರಿಗಳು ಎಸ್ಐಟಿ ತಂಡದಿಂದ ನಡೆದಿದ್ದಾರೆ.

ಹೌದು, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಜೊತೆಗೆ ಈ ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದರು. ಆದರೀಗ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಹಿಂದೆ ಸರಿಯಲು ಐಪಿಎಸ್ ಅಧಿಕಾರಿ ಸೌಮ್ಯಲತಾ ಹಾಗೂ ಮತ್ತೊಬ್ಬ ಐಪಿಎಸ್ಯೇತರ ಅಧಿಕಾರಿ ನಿರ್ಧರಿಸಿದ್ದಾರೆ.
ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದ ಸೌಮ್ಯ ಲತಾ!!
ಸರ್ಕಾರ ರಚಿಸಿದ ಎಸ್ಐಟಿ ತಂಡದ ಸದಸ್ಯರಾಗಿರುವ ಸೌಮ್ಯಲತಾ ಅವರು ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ಪತ್ರ ಬರೆದಿದ್ದು, ವೈಯಕ್ತಿಕ ಕಾರಣಕ್ಕೆ ವಿಶೇಷ ತನಿಖಾ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಆದ್ದರಿಂದ, ತಮ್ಮನ್ನು ತಂಡದಿಂದ ಕೈಬಿಡಬೇಕೆಂದು ಮನವಿ ಮಾಡಿದ್ದರು. ತನಿಖೆಯ ರೂಪರೇಷೆಗಳ ಕುರಿತು ಸಿಐಡಿ ಕಚೇರಿಯಲ್ಲಿ ನಡೆದಿದ್ದ ಎಸ್ಐಟಿ ಸಭೆಗೂ ಸೌಮ್ಯಲತಾ ಅವರು ಗೈರಾಗಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ಪ್ರಣವ್ ಮೊಹಾಂತಿ, ತಂಡದಿಂದ ಸೌಮ್ಯಲತಾ ಅವರ ಹೆಸರನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಮತ್ತೊಬ್ಬ ಅಧಿಕಾರಿಯು ಹೊರಕ್ಕೆ:
SIT ತಂಡಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು, ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳನ್ನು ಒಳಗೊಂಡ 20 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಜುಲೈ 22ರಂದು ಆದೇಶಿಸಿದ್ದರು. ಇದೀಗ 22ರಂದು ನಿಯೋಜಿಸಿದ್ದ 20 ಅಧಿಕಾರಿಗಳ ಪೈಕಿ, ಐಪಿಎಸ್ಯೇತರ ಅಧಿಕಾರಿಯೊಬ್ಬರು ತಂಡದಿಂದ ಕೈಬಿಡುವಂತೆ ಪತ್ರ ಬರೆದಿದ್ದಾರೆ’ ಎಂದು ಮೂಲಗಳು ಹೇಳಿವೆ.
Comments are closed.