Mangalore: ನಂತೂರು-ಪಂಪ್ವೆಲ್ ರಸ್ತೆಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿ, ದೇರಳಕಟ್ಟೆ ವೈದ್ಯ ಸ್ಥಳದಲ್ಲೇ ಸಾವು: ಲಾರಿ ಕೂಡಾ ಪಲ್ಟಿ

Mangalore: ಅತಿವೇಗದ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಡಿವೈಡರ್ಗೆ ಬಡಿದು ಎರಡ್ಮೂರು ಪಲ್ಟಿಯಾದ ಘಟನೆ ನಗರದ ನಂತೂರಿನ ತಾರೆತೋಟ ಬಳಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೇರಳ ಮೂಲದ ಆಲಪ್ಪುಝ ನಿವಾಸಿ, ಡಾ.ಮೊಹಮ್ಮದ್ ಅಮಲ್ (29) ಮೃತ ಡಾಕ್ಟರ್.

ನಿನ್ನೆ ರಾತ್ರಿ 11.45 ರ ಸುಮಾರಿಗೆ ಇವರು ತನ್ನ ಗೆಳತಿ ಕಣಚೂರು ಮೆಡಿಕಲ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿನಿ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಂತೂರಿನಿಂದ ಪಂಪ್ವೆಲ್ ಕಡೆಗೆ ತನ್ನ ಸಿಯಾಝ್ ಕಾರಿನಲ್ಲಿ ಹೋಗುತ್ತಿದ್ದು, ನಿಯಂತ್ರಣ ತಪ್ಪಿ, ಅತಿ ವೇಗದಿಂದ ಡಿವೈಡರ್ ತಾಗಿ, ಗ್ರಿಲ್ಸ್ ಮೇಲೆ ಕಾರು ಹೋಗಿದೆ. ನಂತರ ಗ್ರಿಲ್ಸ್ ತಾಗಿಕೊಂಡೇ ಎರಡ್ಮೂರು ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದಿದೆ.
ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವಿಗೀಡಾಗಿದ್ದಾರೆಂದು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.
ಮುಂದುಗಡೆ ಹೋಗುತ್ತಿರುವ ಗಾಡಿಗಳು ಈ ಘಟನೆಯಿಂದ ಹಠಾತ್ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಲೋಡ್ ತುಂಬಿದ್ದ ಲಾರಿ ಚಾಲಕ ಕೂಡಾ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿ ಲಾರಿ ರಸ್ತೆಯಲ್ಲಿ ಬಿದ್ದಿದೆ. ವೈದ್ಯನ ಜೊತೆಗಿದ್ದ ವಿದ್ಯಾರ್ಥಿನಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ.
ಕದ್ರಿ ಸಂಚಾರಿ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.
Comments are closed.