Tumkur: ಐಸ್ಕ್ರೀಂ ಫ್ಯಾಕ್ಟರಿಯ ಮಾಲೀಕನ ಸಾವಿಗೆ ಬಿಗ್ ಟ್ವಿಸ್ಟ್; ಮಗನಿಂದಲೇ ಕೊಲೆಯಾದ ಉದ್ಯಮಿ

Tumkur: ಐಸ್ಕ್ರೀಂ ಫ್ಯಾಕ್ಟರಿಯ ಮಾಲೀಕ ನಾಗೇಶ್ ಎಂಬುವವರ ಸಾವು ಪ್ರಕರಣಕ್ಕೆ ಮಹತ್ವದ ಮಾಹಿತಿ ಲಭಿಸಿದೆ. ಸ್ವಂತ ಮಗನೇ ತನ್ನ ತಂದೆ ನಾಗೇಶ್ನನ್ನು ಕೊಂದು ನಂತರ ಕಥೆ ಕಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ತಿಮ್ಮಸಂದ್ರದದಲ್ಲಿ ಹಲವು ವರ್ಷಗಳಿಂದ ಕುಣಿಗಲ್ನ ಶಿವಾಜಿಟೆಂಟ್ ರಸ್ತೆಯಲ್ಲಿ ವಾಸವಿದ್ದ ನಾಗೇಶ್ ಅವರು ಇದೇ ರಸ್ತೆಯಲ್ಲಿ ತನ್ನದೇ ಐಸ್ಕ್ರೀಂ ಫ್ಯಾಕ್ಟರಿ ತೆರೆದಿದ್ದ. ಅಲ್ಲಿ ಆತ ತಾನಾಯ್ತು ತನ್ನ ವ್ಯವಹಾರವಾಯ್ತು ಎಂದು ಜೀವನ ಸಾಗಿಸುತ್ತಿದ್ದ. ಆದರೆ ಮೇ 10 ರಂದು ಏಕಾಏಕಿ ಸಾವಿಗೀಡಾಗಿದ್ದರು. ಕರೆಂಟ್ ಶಾಕ್ನಿಂದ ಮೃತಪಟ್ಟಿದ್ದರು ಎನ್ನಲಾಗಿತ್ತು. ಆದರೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ಉದ್ಯಮಿಯ ಕೊಲೆಯ ರಹಸ್ಯ ಬಯಲಾಗಿದೆ.
ಡಿಗ್ರಿ ಓದುತ್ತಿದ್ದ ಮಗ ಸೂರ್ಯ ತನ್ನ ಸ್ನೇಹಿತರ ಜೊತೆ ಸೇರಿ ತನ್ನ ತಂದೆಯನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ.
ನಾಗೇಶ್ ತನ್ನ ಮೊದಲ ಹೆಂಡತಿಯನ್ನು ಬಿಟ್ಟಿದ್ದು ನಂತರ ಇನ್ನೊಂದು ಮದುವೆಯಾಗಿ ಊರು ಬಿಟ್ಟು ಕುಣಿಗಲ್ ನಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಮಕ್ಕಳು. ಎರಡನೇ ಪತ್ನಿ ಹಾಗೂ ತಮ್ಮ ಮಕ್ಕಳಾದ ಡಿಗ್ರಿ ಓದುತ್ತಿದ್ದ ಮಗ ಸೂರ್ಯ ಹಾಗೂ ಶಾಲೆಗೆ ಹೋಗುತ್ತಿದ್ದ ಮಗಳ ಜೊತೆ ವಾಸವಿದ್ದರು ಆದರೆ ಸೂರ್ಯನಿಗೆ ತನ್ನ ಅಪ್ಪನನ್ನು ಕಂಡರೆ ಅದೇನು ಕೋಪ ಇತ್ತೋ, ಮೇ 10 ರ ತಾರೀಕಿನಂದು ತನ್ನ ಗೆಳೆಯನ ಜೊತೆ ಫ್ಯಾಕ್ಟರಿಗೆ ಬಂದು ಜಗಳ ಮಾಡಿದ್ದ. ಹಲ್ಲೆ ಮಾಡಿ ಬಟ್ಟೆಯಿಂದ ಕುತ್ತಿಗೆ ಇಚುಕಿ ಕೊಲೆ ಮಾಡಿದ್ದ.
ಅನಂತರ ಈ ಕೊಲೆ ವಿಷಯ ಯಾರಿಗೂ ತಿಳಿಯಬಾರದೆಂದು ನಾಗೇಶ್ ಕೈಗೆ ಕರೆಂಟ್ ಶಾಕ್ ಕೊಟ್ಟು ವಿದ್ಯುತ್ ಶಾಕ್ನಿಂದ ಸಾವಿಗೀಡಾದ ರೀತಿ ಬಿಂಬಿಸಿದ್ದ. ಇದೀಗ ಈತನ ನಾಟಕ ಬಯಲಾಗಿದ್ದು, ಪೊಲೀಸರು ಸೂರ್ಯನನ್ನು ಬಂಧನ ಮಾಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಎಂಟು ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ವಿಚಾರಣೆ ಸಂದರ್ಭ, ನಾಗೇಶ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ, ಅದೇ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಕೊಲೆ ಆಸ್ತಿ ವಿಚಾರ ಸೇರಿದಂತೆ ನಾಲ್ಕು ಆಯಾಮದಲ್ಲಿ ಸಂಶಯ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.
Comments are closed.