Belthangady : ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ – ಬ್ರಹ್ಮಕಲಶೋತ್ಸವಕ್ಕಿತ್ತು ಮುಸ್ಲಿಮರ ಈ ಎಲ್ಲಾ ಕೊಡುಗೆ

Belthangady : ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಮಾಡಿದ ಕೋಮು ಪ್ರಚೋದನಕಾರಿ ಭಾಷಣ ಕರಾವಳಿಯಾದ್ಯಂತ ಬಾರಿ ಚರ್ಚೆಯಾಗಿತ್ತು. ಈ ಕುರಿತಾಗಿ ಹರೀಶ್ ಪೂಂಜ ಅವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಈ ಬೆನ್ನಲ್ಲೇ ತೆಕ್ಕಾರು ಗ್ರಾಮಸ್ಥರು ಹರೀಶ್ ಪೂಂಜ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮುಸ್ಲಿಮರು ಅಪಾರ ಕೊಡುಗೆ ನೀಡಿರುವುದು, ಸೇವೆ ಮಾಡಿರುವುದನ್ನು ದೇವಾಲಯದ ಆಡಳಿತ ಮಂಡಳಿ ಬಹಿರಂಗಪಡಿಸಿದೆ.
ಹೌದು, ದೇವಸ್ಥಾನ ಆಡಳಿತ ಮಂಡಳಿ ಸಭೆ ನಡೆಸಿ ಸ್ಥಳೀಯ ಮುಸ್ಲಿಮರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿದ್ದರು ಎಂಬುದನ್ನು ತಿಳಿಸಿದೆ. ಮುನೀರ್ ಎಂಬವರು ಮರವನ್ನು ನೀಡಿದ್ದರು, ಅಬ್ಬಾಸ್ ಎಂಬವರು ವೇದಿಕೆ ನಿರ್ಮಿಸಲು ಸ್ಥಳವನ್ನು ನೀಡಿದ್ದರು, ಭಕ್ತಾದಿಗಳಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಟಿ.ಎಚ್.ಉಸ್ತಾದರ ಮಕ್ಕಳ ಒಡೆತನದ ಜಮೀನಿನಲ್ಲಿ ನೀಡಲಾಗಿತ್ತು, ನೀರಿನ ವ್ಯವಸ್ಥೆಗೆ ಮತ್ತು ಅನ್ನ ಸಂತರ್ಪಣೆಗೆ ಮುಸ್ಲಿಮರ ಜಾಗವನ್ನೇ ಬಳಸಲಾಗಿತ್ತು. ಇದಲ್ಲದೆ ಆರ್ಥಿಕವಾಗಿಯೂ ಗ್ರಾಮದ ಮುಸ್ಲಿಮರು ದೇವಸ್ಥಾನಕ್ಕೆ ಸಹಾಯವನ್ನು ನೀಡಿದ್ದರು. ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಸ್ಥಳೀಯ ಮುಸ್ಲಿಮರು ಬ್ಯಾನರ್ ಗಳನ್ನು ಅಳವಡಿಸಿದ್ದರು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
Comments are closed.