Rahul Gandhi: ಹಿಂದೂ ಧರ್ಮದಿಂದ ರಾಹುಲ್ ಗಾಂಧಿ ಉಚ್ಛಾಟನೆ – ಅವಿಮುಕ್ತಶ್ವರಾನಂದ ಶ್ರೀ ಘೋಷಣೆ

Share the Article

Rahul Gandhi: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುತ್ತಿದ್ದೇವೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಘೋಷಿಸಿದ್ದಾರೆ.

ಬದರಿನಾಥದ ಶಂಕರಾಚಾರ್ಯ ಆಶ್ರಮದಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿಯವರ ಸಂಸತ್ತಿನ ಭಾಷಣದಲ್ಲಿ ಮನುಸ್ಮೃತಿಯ ಬಗ್ಗೆ ಮಾಡಿದ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮನುಸ್ಮೃತಿಯ ಬಗ್ಗೆ ನೀಡಿದ ಹೇಳಿಕೆಗಳು ‘ಸನಾತನ ಧರ್ಮಕ್ಕೆ’ ಅವಮಾನಕರ. ಅಲ್ಲದೆ, ಈ ಬಗ್ಗೆ ಮೂರು ತಿಂಗಳ ಹಿಂದೆ ಸ್ಪಷ್ಟನೆ ಕೇಳಿ ಕಳುಹಿಸಿದ ಮನವಿಗೂ ರಾಹುಲ್ ಗಾಂಧಿ ಉತ್ತರಿಸಿಲ್ಲ‌. ಹೀಗಾಗಿ ರಾಹುಲ್‌ ಗಾಂಧಿ ಅವರನ್ನು ಹಿಂದೂ ಧರ್ಮದಿಂದ ಸಾರ್ವಜನಿಕವಾಗಿ ಬಹಿಷ್ಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಡಿಸೆಂಬರ್ 2024ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುವಾಗ, ರಾಹುಲ್ ಗಾಂಧಿಯವರು ಮನುಸ್ಮೃತಿಯನ್ನು ಉಲ್ಲೇಖಿಸಿ, ಆಡಳಿತ ಪಕ್ಷದ ಪೀಠಗಳತ್ತ ಬೆರಳು ತೋರಿಸಿ, ‘ಇದು ನಮ್ಮ ಧರ್ಮಗ್ರಂಥ. ಇದರಲ್ಲಿ ಏನಿದೆ?’ ಎಂದು ಪ್ರಶ್ನಿಸಿದ್ದರು. ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಘಟನೆಯನ್ನು ಉಲ್ಲೇಖಿಸಿದ ಅವರು, ‘ಅತ್ಯಾಚಾರಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಆದರೆ ಸಂತ್ರಸ್ತೆಯ ಕುಟುಂಬವು ತಮ್ಮ ಮನೆಯಲ್ಲೇ ಸೀಮಿತವಾಗಿದೆ. ಇದು ಸಂವಿಧಾನದಲ್ಲಿ ಎಲ್ಲಿ ಬರೆಯಲಾಗಿದೆ? ಇದು ನಿಮ್ಮ ಪುಸ್ತಕದಲ್ಲಿ, ಅಂದರೆ ಮನುಸ್ಮೃತಿಯಲ್ಲಿ ಬರೆಯಲಾಗಿದೆ,’ ಎಂದು ಟೀಕಿಸಿದ್ದರು. ಈ ಹೇಳಿಕೆಯನ್ನು ಶಂಕರಾಚಾರ್ಯರು ಧರ್ಮಗ್ರಂಥದ ಅವಮಾನ ಎಂದು ಪರಿಗಣಿಸಿದ್ದಾರೆ.

ಶಂಕರಾಚಾರ್ಯರು ತಮ್ಮ ಆಕ್ಷೇಪವನ್ನು ರಾಹುಲ್ ಗಾಂಧಿಯವರಿಗೆ ಜ್ಞಾಪನೆಯ ಮೂಲಕ ತಿಳಿಸಿದ್ದರು. ‘ನಾವು ಮೂರು ತಿಂಗಳ ಕಾಲ ಅವರ ಸ್ಪಷ್ಟೀಕರಣಕ್ಕಾಗಿ ಕಾದಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ,’ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದ, ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಅವರು ರಾಹುಲ್ ಗಾಂಧಿಯವರನ್ನು ಹಿಂದೂ ಧರ್ಮದಿಂದ ಹೊರಹಾಕುವ ಘೋಷಣೆಯನ್ನು ಮಾಡಿದ್ದಾರೆ. ‘ಸನಾತನ ಧರ್ಮದ ಮೇಲಿನ ಈ ದಾಳಿಯನ್ನು ಸಹಿಸಲಾಗದು. ರಾಹುಲ್ ಗಾಂಧಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಬೇಕಿತ್ತು,’ ಎಂದು ಶಂಕರಾಚಾರ್ಯರು ಗುಡುಗಿದ್ದಾರೆ.

Comments are closed.