ಪ್ರವಾದಿ ಮೊಹಮ್ಮದ್‌ಗೆ ಅವಹೇಳನ: ಶಾಸಕ ಬಸನ ಗೌಡ ಯತ್ನಾಳ್ ವಿರುದ್ಧ ಮೊಳಗಿದ ಆಕ್ರೋಶ

Share the Article

Vijayapura: ಪ್ರವಾದಿ ಮೊಹಮ್ಮದ್ ಪೈಗಂಬ‌ರ್’ರನ್ನು ಅವಹೇಳನ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಇಂದು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮುಸ್ಲಿಮರು, ‘ಧರ್ಮ ವಿರೋಧಿ ಬಸನಗೌಡಗೆ ಧಿಕ್ಕಾರ, ಜನ ವಿರೋಧಿ ಬಸನಗೌಡಗೆ ಧಿಕ್ಕಾರ, ಬಚ್ಚಲು ಬಾಯಿ ಯತ್ನಾಳಗೆ ಧಿಕ್ಕಾರ ಕೂಗಿದರು. ಅವರನ್ನು ಬಂಧಿಸಿ, ಬಂಧಿಸಿ, ಯತ್ನಾಳ ಬಂಧಿಸಿ ಎಂಬ ಘೋಷಣೆಗಳನ್ನು ಕೂಗಿದರು.

ಆ ಸಂದರ್ಭ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ವಿಶ್ವಗುರು ಬಸವಣ್ಣ, ಪ್ರವಾದಿ ಮೊಹಮ್ಮದ್ ಪೈಗಂಬರ್ ಸೇರಿದಂತೆ ಎಲ್ಲರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿರುವ ಯತ್ನಾಳ ಮನುಷ್ಯನೆ ಅಲ್ಲ, ಅವನೊಬ್ಬ ಹೈವಾನ್, ವಿಜಯಪುರದ ಹುಚ್ಚು ನಾಯಿ’ ಎಂದು ಏಕವಚನದಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲರು, ‘ ಬಸನ ಗೌಡ ಯತ್ನಾಳ ಆಡುತ್ತಿರುವ ಮಾತುಗಳಿಂದ ಆತನ ವ್ಯಕ್ತಿತ್ವಕ್ಕೆ ಮಾತ್ರವಲ್ಲ, ಸರ್ವರನ್ನು ಸಮಾನ ಕಂಡ ಇಡೀ ಬಸವನಾಡಿಗೆ ಅವಮಾನವಾಗಿದೆ. ಅವರು ಸಮಾಜದ ಶಾಂತಿಗೆ ಭಂಗ ತರುತ್ತಿದ್ದು, ಅವರ ವಿರುದ್ಧ ಮುಖ್ಯಮಂತ್ರಿ, ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ವಿಠಲ ಕಟಕದೊಂಡ, ವಿಜಯಾನಂದ ಕಾಶಪ್ಪನವರ, ಅಶೋಕ ಮನಗೂಳಿ, ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ, ಕರ್ನಾಟಕ ಅಹಲೆ ಸುನ್ನತ್ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ್ ತನ್ನೀರ್ ಪೀರಾ ಹಾಶ್ಮೀ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಹಾಗೂ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿ, ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ನಾಲೈದು ತಾಸು ಉರಿ ಬಿಸಿಲಿನಲ್ಲಿಯೂ ಪ್ರತಿಭಟನೆ ನಡೆಸಿ, ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ, ಬಸನ ಗೌಡ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Comments are closed.